image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಹಿಳೆಯರು ಮನೆಯಲ್ಲೇ ಇರಬೇಕು: ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿಕೆಗೆ ತೀವ್ರ ವಿರೋಧ

ಮಹಿಳೆಯರು ಮನೆಯಲ್ಲೇ ಇರಬೇಕು: ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿಕೆಗೆ ತೀವ್ರ ವಿರೋಧ

ಕೇರಳಮ್ : ಕೇರಳದ ಗ್ರ್ಯಾಂಡ್ ಮುಫ್ತಿ ಹಾಗೂ ಅಖಿಲ ಭಾರತ ಸುನ್ನಿ ಜಮಿಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೇಖ್ ಅಬೂಬಕರ್ ಅಹ್ಮದ್ (ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್) ಮಹಿಳೆಯರ ಕುರಿತು ನೀಡಿರುವ ಹೇಳಿಕೆಯೊಂದು ರಾಜ್ಯದಲ್ಲಿ ತೀವ್ರ ವಿವಾದವನ್ನು ಹುಟ್ಟುಹಾಕಿದೆ. ಮಹಿಳೆಯರು ಸಾರ್ವಜನಿಕವಾಗಿ ವೇದಿಕೆಗಳ ಮೇಲೆ ಕಾಣಿಸಿಕೊಳ್ಳಬಾರದು ಮತ್ತು ಅವರು ಮನೆಯಲ್ಲಿಯೇ ಇರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಕೊಚ್ಚಿಯಲ್ಲಿ ನಡೆದ 'ಹುಬ್ಬುಲ್ ರಸೂಲ್' ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಚಿನ್ನದ ಆಭರಣಗಳಿಗೆ ಹೋಲಿಸಿದ್ದಾರೆ. "ಚಿನ್ನದ ಸರ ತನ್ನ ಸೌಂದರ್ಯ ಮತ್ತು ಮೌಲ್ಯವನ್ನು ಉಳಿಸಿಕೊಳ್ಳಬೇಕಾದರೆ ಅದನ್ನು ಪೆಟ್ಟಿಗೆಯೊಳಗೆ ಭದ್ರವಾಗಿ ಇಡಬೇಕು. ರಸ್ತೆ ಬದಿಯಲ್ಲಿರುವ ಕಲ್ಲಿನ ವಸ್ತುಗಳಂತೆ ಅದನ್ನು ಎಲ್ಲರಿಗೂ ಕಾಣುವಂತೆ ಇಡಬಾರದು. ಅದೇ ರೀತಿ ಮಹಿಳೆಯರು ಸಾರ್ವಜನಿಕ ವಲಯಕ್ಕೆ ಬಂದರೆ ದೊಡ್ಡ ವಿನಾಶಕ್ಕೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿಯೇ ಇಸ್ಲಾಂ ಮಹಿಳೆಯರಿಗೆ ಪರ್ದಾ ಪದ್ಧತಿಯನ್ನು ಕಡ್ಡಾಯಗೊಳಿಸಿದೆ" ಎಂದು ಅವರು ಹೇಳಿದ್ದಾರೆ. ಈ ನಿರ್ಬಂಧಗಳು ಮಹಿಳೆಯರನ್ನು ಕೀಳಾಗಿ ಕಾಣುವುದಕ್ಕಲ್ಲ, ಬದಲಾಗಿ ಅವರನ್ನು ಗೌರವಿಸಲು ಮತ್ತು ರಕ್ಷಿಸಲು ಇಸ್ಲಾಂ ನೀಡಿರುವ ನಿಯಮಗಳಾಗಿವೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಮೌಲ್ವಿಯವರ ಈ ಹೇಳಿಕೆಗೆ ಕೇರಳದ ರಾಜಕೀಯ ವಲಯದಲ್ಲಿ, ಮುಖ್ಯವಾಗಿ ಎಡಪಕ್ಷದ (ಸಿಪಿಐ-ಎಂ) ನಾಯಕರಿಂದ ಕಟು ವಿರೋಧ ವ್ಯಕ್ತವಾಗಿದೆ. ಹಿರಿಯ ಕಮ್ಯುನಿಸ್ಟ್ ನಾಯಕಿ ಪಿ.ಕೆ. ಶ್ರೀಮತಿ ಟೀಚರ್ ಈ ಹೇಳಿಕೆಯನ್ನು 'ಮಹಿಳಾ ವಿರೋಧಿ ಮತ್ತು ಅತ್ಯಂತ ಅವಹೇಳನಕಾರಿ' ಎಂದು ಖಂಡಿಸಿದ್ದು, ಆಧುನಿಕ ಕೇರಳ ಇಂತಹ ಹೇಳಿಕೆಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ತಮ್ಮ ವಿರುದ್ಧ ವ್ಯಕ್ತವಾದ ಟೀಕೆಗಳಿಗಬಹಿರಂಗವಾಗಿಯೇ ತಿರುಗೇಟು ನೀಡಿರುವ ಕಾಂತಪುರಂ, "ನಾವು ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ್ದೇವೆ. ಹೀಗಾಗಿ ಧಾರ್ಮಿಕ ನಿಯಮಗಳನ್ನು ಸಮಾಜಕ್ಕೆ ತಿಳಿಸುವುದು ನಮ್ಮ ಕರ್ತವ್ಯ. ಇತರ ಸಂಘಟನೆಗಳ ನಾಯಕರು ಏನೇ ವಿರೋಧಿಸಿದರೂ, ನಾವು ಇದನ್ನು ಹೇಳುತ್ತಲೇ ಇರುತ್ತೇವೆ. ಯಾರಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ" ಎಂದು ಸವಾಲು ಎಸೆದಿದ್ದಾರೆ.

Category
ಕರಾವಳಿ ತರಂಗಿಣಿ