ಭೋಪಾಲ್ : ಪ್ರಕೃತಿಯ ಕಠಿಣ ಸವಾಲುಗಳು ಮತ್ತು ಭೌಗೋಳಿಕ ಅಡೆತಡೆಗಳನ್ನು ಮೆಟ್ಟಿ ನಿಂತು ಭಾರತೀಯ ಎಂಜಿನಿಯರ್ಗಳು ಹಾಗೂ ಕಾರ್ಮಿಕರು ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸ್ಲೀಮನಾಬಾದ್ನಲ್ಲಿ ವಿಂಧ್ಯ ಪರ್ವತ ಶ್ರೇಣಿಯನ್ನು ಕೊರೆದು ನಿರ್ಮಿಸಲಾಗುತ್ತಿದ್ದ, ದೇಶದ ಅತಿ ಉದ್ದದ ನೀರಾವರಿ ಸುರಂಗ ಮಾರ್ಗದ ಕೊನೆಯ ಬಂಡೆಯ ಗೋಡೆಯನ್ನು ಯಂತ್ರಗಳು ಯಶಸ್ವಿಯಾಗಿ ಭೇದಿಸಿವೆ. ಇದರೊಂದಿಗೆ 17 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಬಿದ್ದಿದ್ದು, ಎರಡು ಕಡೆಯಿಂದ ಬರುತ್ತಿದ್ದ ಸುರಂಗ ಮಾರ್ಗಗಳು ಕೊನೆಗೂ ಪರಸ್ಪರ ಸಂಧಿಸಿವೆ.
ಸ್ಥಳೀಯ ಪುರಾಣಗಳ ಪ್ರಕಾರ, ಮೈಕಲ್ ಬೆಟ್ಟಗಳ ಮಗಳಾದ 'ನರ್ಮದಾ' ಮತ್ತು 'ಸೋನಭದ್ರ' ನದಿಗೆ ವಿವಾಹವಾಗಬೇಕಿತ್ತು. ಆದರೆ ಒಂದು ತಪ್ಪು ತಿಳುವಳಿಕೆಯಿಂದಾಗಿ ನರ್ಮದೆಯು ಕೋಪಗೊಂಡು ಪಶ್ಚಿಮದತ್ತ ಮುಖ ಮಾಡಿ ಹರಿದು ಅರೇಬಿಯನ್ ಸಮುದ್ರ ಸೇರಿದರೆ, ಸೋನಭದ್ರನು ಪೂರ್ವದತ್ತ ಸಾಗಿ ಗಂಗಾ ನದಿಯನ್ನು ಸೇರಿದನು. ಇವೆರಡರ ಮಧ್ಯೆ ದೈತ್ಯ ಗೋಡೆಯಂತೆ ವಿಂಧ್ಯ ಪರ್ವತಗಳು ನಿಂತಿದ್ದವು. ನೈಸರ್ಗಿಕವಾಗಿ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿದ್ದ ಈ ನದಿಗಳ ಜಲಾನಯನ ಪ್ರದೇಶಗಳನ್ನು ಒಂದಾಗಿಸಲು ಆಧುನಿಕ ಎಂಜಿನಿಯರಿಂಗ್ ವಿಜ್ಞಾನವು ಈ ಸುರಂಗದ ಮೂಲಕ ಈಗ ಹೊಸ ಹಾದಿ ಸೃಷ್ಟಿಸಿದೆ. ಈ ಮೂಲಕ ಜಾನಪದ ಪುರಾಣಗಳ ವಿರಹಕ್ಕೆ ಆಧುನಿಕ ತಂತ್ರಜ್ಞಾನವು ಮುಕ್ತಿ ನೀಡಿದಂತಾಗಿದೆ.
ನರ್ಮದಾ ಮತ್ತು ಸೋನ್ ಕಣಿವೆಗಳನ್ನು ಬೇರ್ಪಡಿಸುವ ವಿಂಧ್ಯನ್ ಪರ್ವತವು ಸುತ್ತಮುತ್ತಲಿನ ಭೂಪ್ರದೇಶದಿಂದ ಸುಮಾರು 40 ಮೀಟರ್ ಎತ್ತರವಿದೆ. ಈ ಪರ್ವತದ ಮೇಲೆ ತೆರೆದ ಕಾಲುವೆ ನಿರ್ಮಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿತ್ತು. ಏಕೆಂದರೆ ಅದಕ್ಕಾಗಿ ಬರೋಬ್ಬರಿ 40 ಮಿಲಿಯನ್ ಘನ ಮೀಟರ್ಗಿಂತಲೂ ಹೆಚ್ಚಿನ ಭೂಮಿಯನ್ನು ಅಗೆಯಬೇಕಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ನೂರಾರು ಮೀಟರ್ ಅಗಲದ ಪ್ರದೇಶವನ್ನು ಕತ್ತರಿಸಿ, ಅಲ್ಲಿನ ಭಾರಿ ಅಂತರ್ಜಲ ಮಟ್ಟವನ್ನು ಎದುರಿಸುವುದು ದೊಡ್ಡ ಸವಾಲಾಗಿತ್ತು. ಆದ್ದರಿಂದ ಎಂಜಿನಿಯರ್ಗಳು ಪರ್ವತದ ಒಳಭಾಗದಲ್ಲೇ ಸುರಂಗ ಕೊರೆಯುವ ಕಠಿಣ ನಿರ್ಧಾರ ಕೈಗೊಂಡರು. ಈ ಬೃಹತ್ ಸುರಂಗವು ಒಟ್ಟು 11.95 ಕಿಲೋಮೀಟರ್ ಉದ್ದ ಹಾಗೂ 10.14 ಮೀಟರ್ ಅಗಲವನ್ನು ಹೊಂದಿದೆ.
ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಭೂಮಿಯ ಆಳದಲ್ಲಿ ಕಠಿಣ ಬಂಡೆಗಳನ್ನು ಕೊರೆದು ಈ ಬೃಹತ್ ಕೊಳವೆಯಾಕಾರದ ಸುರಂಗವನ್ನು ನಿರ್ಮಿಸಲಾಗಿದೆ. ಸುರಂಗ ಮಾರ್ಗ ನಿರ್ಮಾಣದ ಸಮಯದಲ್ಲಿ ಪರ್ವತದ ಒಳಗಿನ ಭೂಪ್ರದೇಶವು ಪ್ರತಿ 10 ರಿಂದ 15 ಮೀಟರ್ಗೆ ತನ್ನ ಸ್ವರೂಪ ಬದಲಾಯಿಸುತ್ತಿತ್ತು. ಗಟ್ಟಿಯಾದ ಅಮೃತಶಿಲೆ, ಸುಣ್ಣದ ಕಲ್ಲುಗಳು ದಿಢೀರನೆ ಮೃದುವಾದ ಮಣ್ಣು ಮತ್ತು ಸ್ಲೇಟ್ ಹಾಳೆಗಳಾಗಿ ಮಾರ್ಪಡುತ್ತಿದ್ದವು. ಸುಣ್ಣದ ಕಲ್ಲುಗಳು ಕರಗಿದ ಪರಿಣಾಮವಾಗಿ ವಿಶಾಲವಾದ ಭೂಗತ ಕುಳಿಗಳು ಸೃಷ್ಟಿಯಾಗಿದ್ದವು. ಸುರಂಗದ ಒಳಗೆ ನಿಮಿಷಕ್ಕೆ 18,000 ದಿಂದ 25,000 ಲೀಟರ್ಗಳಷ್ಟು ಅಂತರ್ಜಲ ನುಗ್ಗುತ್ತಿತ್ತು. ಕಾರ್ಮಿಕರು ನಿರಂತರವಾಗಿ ಪಂಪ್ಗಳ ಮೂಲಕ ನೀರನ್ನು ಬಸಿಯಬೇಕಾಗಿತ್ತು. ತೀವ್ರ ತಾಂತ್ರಿಕ ಸವಾಲುಗಳಿಂದಾಗಿ ಅಮೆರಿಕದ ಪ್ರಸಿದ್ಧ 'ರಾಬಿನ್ಸ್' ಟನಲ್ ಬೋರಿಂಗ್ ಯಂತ್ರಗಳು ಇಲ್ಲಿ ಸಿಲುಕಿಕೊಂಡು ಹಾನಿಗೊಳಗಾಗಿದ್ದವು. ಆರಂಭದಲ್ಲಿ ಕೇವಲ ₹799 ಕೋಟಿ ಇದ್ದ ಈ ಯೋಜನೆಯ ವೆಚ್ಚವು 17 ವರ್ಷಗಳ ವಿಳಂಬ ಮತ್ತು ಸವಾಲುಗಳ ನಂತರ ಕೊನೆಗೆ ₹1,600 ಕೋಟಿಗೆ ಏರಿಕೆಯಾಯಿತು.
ಯೋಜನೆ ತಡವಾಗುತ್ತಿದ್ದಂತೆ ಎಂಜಿನಿಯರ್ಗಳು ಪರ್ವತದ ಎರಡು ಕಡೆಯಿಂದ ಸುರಂಗ ಕೊರೆಯುವ ನಿರ್ಧಾರಕ್ಕೆ ಬಂದರು. ಒಂದು ಕಡೆಯಿಂದ ಅಮೇರಿಕನ್ ರಾಬಿನ್ಸ್ ಯಂತ್ರ ಹಾಗೂ ಕೆಳಭಾಗದಿಂದ ಅತ್ಯಾಧುನಿಕ ಜರ್ಮನ್ ಹೆಚ್.ಕೆ ಯಂತ್ರಗಳನ್ನು ಬಳಸಿ ಪರ್ವತವನ್ನು ಕತ್ತರಿಸಲಾಯಿತು. ಕೊನೆಗೆ 17 ವರ್ಷಗಳ ನಿರಂತರ ಶ್ರಮದ ನಂತರ, 6.5 ಕಿಲೋಮೀಟರ್ ಉದ್ದದ ಮೇಲ್ಮುಖ ಸುರಂಗ ಮತ್ತು 5.4 ಕಿಲೋಮೀಟರ್ ಕೆಳಮುಖ ಸುರಂಗಗಳು ಸ್ಲೀಮಾನಾಬಾದ್ ಜಂಕ್ಷನ್ನಲ್ಲಿ ನಿಖರವಾಗಿ ಒಂದನ್ನೊಂದು ಸಂಧಿಸಿದವು. ಕೊನೆಯ ಬಂಡೆ ಉರುಳುತ್ತಿದ್ದಂತೆ, ಕತ್ತಲೆಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರ ಮುಖದಲ್ಲಿ ಹರ್ಷದ ನಗೆ ಅರಳಿತು.
ಈ ಸುರಂಗದ ಅತ್ಯಂತ ದೊಡ್ಡ ವಿಶೇಷತೆಯೆಂದರೆ, ಇದರ ಮೂಲಕ ಹರಿಯುವ ನರ್ಮದಾ ನದಿಯ ನೀರು ಯಾವುದೇ ಪಂಪ್ಗಳ ಸಹಾಯವಿಲ್ಲದೆ ಕೇವಲ ನೈಸರ್ಗಿಕ ಗುರುತ್ವಾಕರ್ಷಣೆಯ ಹರಿವಿನ ಮೂಲಕವೇ ಸೋನ್ ಜಲಾನಯನ ಪ್ರದೇಶವನ್ನು ತಲುಪುತ್ತದೆ. ಈ 'ಬಾರ್ಗಿ ತಿರುವು ಯೋಜನೆ'ಯು ಮಧ್ಯಪ್ರದೇಶದ ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ, ರೇವಾ ಮತ್ತು ಪನ್ನಾ ಜಿಲ್ಲೆಗಳ ಒಟ್ಟು 1,450 ಕ್ಕೂ ಹೆಚ್ಚು ಬರಪೀಡಿತ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಒದಗಿಸಲಿದೆ. ಇದರ ಮೂಲಕ ಒಟ್ಟು 245,000 ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸುವ ಗುರಿ ಹೊಂದಲಾಗಿದ್ದು, ಕೇವಲ ಸ್ಲೀಮಾನಾಬಾದ್ ಸುರಂಗಕ್ಕೆ ಸಂಪರ್ಕ ಹೊಂದಿದ ಪ್ರದೇಶವೇ 185,000 ಹೆಕ್ಟೇರ್ಗಳನ್ನು ಒಳಗೊಂಡಿದೆ.
ಸುರಂಗ ಮಾರ್ಗವು ಈಗ ಸಂಪೂರ್ಣವಾಗಿ ಸಿದ್ಧವಾಗಿದ್ದರೂ, ನೀರು ಕೊನೆಯ ರೈತನ ಹೊಲವನ್ನು ತಲುಪಲು ಇನ್ನೂ ಕೆಲವು ಕಾಲುವೆಗಳು ಮತ್ತು ಎಂಟು ಜಲಚರಗಳ (Aqueducts) ನಿರ್ಮಾಣ ಕಾರ್ಯ ಬಾಕಿ ಇದೆ. ಮಾರ್ಚ್ 2026 ರ ವೇಳೆಗೆ 44,160 ಹೆಕ್ಟೇರ್ಗಳಿಗೆ ನೀರಾವರಿ ಒದಗಿಸಲಾಗಿದ್ದು, ಸೆಪ್ಟೆಂಬರ್ 2026 ರ ವೇಳೆಗೆ ಇದನ್ನು 87,433 ಹೆಕ್ಟೇರ್ಗಳಿಗೆ ಮತ್ತು ಡಿಸೆಂಬರ್ 2027 ರ ವೇಳೆಗೆ 154,693 ಹೆಕ್ಟೇರ್ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಯೋಜನೆ ಸಂಪೂರ್ಣಗೊಂಡರೆ ಈ ಭಾಗದ ಗ್ರಾಮೀಣ ಆರ್ಥಿಕತೆ, ಕೃಷಿ ಪದ್ಧತಿ ಮತ್ತು ಜನರ ಜೀವನಮಟ್ಟ ಸಂಪೂರ್ಣವಾಗಿ ಬದಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.