ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಕ್ರಮ ವಲಸಿಗರ ವಿರುದ್ಧ ಬಿಗಿ ಕ್ರಮಗಳು ಆರಂಭವಾಗಿದ್ದು, ಗಡಿ ಭಾಗಗಳಲ್ಲಿ ತೀವ್ರ ಆತಂಕ ಮತ್ತು ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ. ರಾಜ್ಯ ಸರ್ಕಾರದ ಕಠಿಣ ಕಾನೂನು ಕ್ರಮಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿ ಬಂಧನ ಕೇಂದ್ರಗಳ (ಹೋಲ್ಡಿಂಗ್ ಸೆಂಟರ್) ಸ್ಥಾಪನೆಯ ನಿರ್ಧಾರದಿಂದಾಗಿ, ದಾಖಲೆರಹಿತ ನೂರಾರು ಬಾಂಗ್ಲಾದೇಶಿ ವಲಸಿಗರು ಭೀತಿಯಿಂದಾಗಿ ಸ್ವದೇಶಕ್ಕೆ ಮರಳಲು ಗಡಿಗಳತ್ತ ಧಾವಿಸುತ್ತಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಹಕೀಂಪುರ ಅಂತರರಾಷ್ಟ್ರೀಯ ಗಡಿಯಲ್ಲಿ ಪ್ರಸ್ತುತ ಇಂತಹದ್ದೇ ಒಂದು ಅಭೂತಪೂರ್ವ ದೃಶ್ಯ ಕಂಡುಬರುತ್ತಿದೆ. ವರ್ಷಗಟ್ಟಲೆ ಭಾರತದಲ್ಲಿ ನೆಲೆಸಿದ್ದ ನೂರಾರು ಕುಟುಂಬಗಳು ತಮ್ಮ ದಿನಬಳಕೆಯ ಸಾಮಗ್ರಿಗಳು, ಚೀಲ, ಕಂಬಳಿಗಳನ್ನು ಹಿಡಿದುಕೊಂಡು, ವಯೋವೃದ್ಧರು ಹಾಗೂ ಮಕ್ಕಳೊಂದಿಗೆ ಗಡಿಯ ಬಳಿ ಕಾಯುತ್ತಾ ನಿಂತಿವೆ.
ಗಡಿ ಮುಂಚೂಣಿ ಗೇಟ್ ಬಳಿ ಪೊಲೀಸರು ವಿಶೇಷ ನೋಂದಣಿ ಕೇಂದ್ರವನ್ನು ತೆರೆದಿದ್ದು, ಸ್ವದೇಶಕ್ಕೆ ಮರಳಲು ಇಚ್ಛಿಸಿ ಬರುವವರ ಸಂಪೂರ್ಣ ವಿವರಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ವಲಸಿಗರ ಬಳಿ ಇರುವ ಬಾಂಗ್ಲಾದೇಶದ ಹಳೆಯ ದಾಖಲೆಗಳನ್ನು ಪರಿಶೀಲಿಸಿ ಡೇಟಾಬೇಸ್ ಸಿದ್ಧಪಡಿಸುತ್ತಿದ್ದು, ನಂತರ ಇವರನ್ನು ತಾತ್ಕಾಲಿಕ ತಂಗುದಾಣಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಕೇವಲ ಮೂರ್ನಾಲ್ಕು ದಿನಗಳಲ್ಲಿ 350ಕ್ಕೂ ಹೆಚ್ಚು ಬಾಂಗ್ಲಾದೇಶಿಗರ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿಗೆ ಆಗಮಿಸುತ್ತಿರುವವರಲ್ಲಿ ಹೆಚ್ಚಿನವರು ಕೊಲ್ಕತ್ತಾದ ನ್ಯೂ ಟೌನ್, ಹತಿಯಾರಾ ಹಾಗೂ ದುಮ್ ದುಮ್ ನಂತಹ ನಗರ ಪ್ರದೇಶಗಳಲ್ಲಿ ದಿನಗೂಲಿ, ಮನೆಗೆಲಸ ಹಾಗೂ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರಾಗಿದ್ದಾರೆ.
ಭಾರತಕ್ಕೆ ದಲ್ಲಾಳಿಗಳ ಮೂಲಕ ಅಕ್ರಮವಾಗಿ ನುಸುಳಿದ್ದಾಗಿ ಅನೇಕರು ಒಪ್ಪಿಕೊಂಡಿದ್ದರೂ, ಭಾರತದಲ್ಲೇ ಹುಟ್ಟಿ ಬೆಳೆದ ಇಲ್ಲಿನ ಎರಡನೇ ತಲೆಮಾರಿನ ಯುವ ಪೀಳಿಗೆಯ ಪರಿಸ್ಥಿತಿ ಮಾತ್ರ ಅತ್ಯಂತ ದಯನೀಯವಾಗಿದೆ. 2003ರಲ್ಲಿ ಭಾರತದಲ್ಲೇ ಜನಿಸಿದ ಹಿದೋಯ್ ಮುಲ್ಲಾ ಎಂಬ ಯುವಕ ಅಳಲು ತೋಡಿಕೊಂಡಿದ್ದು, "ನನ್ನ ಹೆತ್ತವರು ಅನಕ್ಷರಸ್ಥರಾಗಿದ್ದರಿಂದ ಯಾವುದೇ ಭಾರತೀಯ ದಾಖಲೆಗಳನ್ನು ಮಾಡಿಸಲು ಅವರಿಗೆ ತಿಳಿದಿರಲಿಲ್ಲ. ನನ್ನ ಬಳಿ ಪ್ಯಾನ್ ಕಾರ್ಡ್, ಪಡಿತರ ಚೀಟಿ ಹಾಗೂ ಶಾಲಾ ಪ್ರಮಾಣಪತ್ರಗಳಿದ್ದರೂ ನನ್ನ ವೋಟರ್ ಐಡಿ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಾನು ಬೆಳೆದಿದ್ದೇ ಈ ದೇಶದ ಸಂಸ್ಕೃತಿಯಲ್ಲಿ, ಆದರೆ ಈಗ ನಮಗೆ ಪರಿಚಯವೇ ಇಲ್ಲದ ದೇಶಕ್ಕೆ ನಮ್ಮನ್ನು ಕಳುಹಿಸಲಾಗುತ್ತಿದೆ. ಅಲ್ಲಿ ನಮ್ಮ ಭವಿಷ್ಯವೇ ಶೂನ್ಯ," ಎಂದು ಕಣ್ಣೀರು ಹಾಕಿದ್ದಾನೆ. ಮತ್ತೊಂದೆಡೆ, ಸ್ಥಳೀಯ ರಾಜಕೀಯ ಪ್ರಭಾವ ಬಳಸಿ ಈ ಹಿಂದೆ ಮತದಾನದ ಹಕ್ಕು ಪಡೆದಿದ್ದ ಮಾಫುಜಾ ಖಾತುನ್ ಎಂಬ ಮಹಿಳೆ, "ನಾವು ಇಷ್ಟು ವರ್ಷಗಳ ಕಾಲ ಇಲ್ಲಿನ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದೇವೆ. ಆದರೆ ಈಗ ನಮ್ಮ ವೋಟರ್ ಐಡಿಗಳನ್ನು ರದ್ದುಗೊಳಿಸಲಾಗಿದೆ. ಸರ್ಕಾರದ ದೃಷ್ಟಿಯಲ್ಲಿ ನಾವು ಪರಕೀಯರಾಗಿರುವುದರಿಂದ ಬಾಂಗ್ಲಾದೇಶಕ್ಕೆ ಮರಳಲೇಬೇಕಾಗಿದೆ," ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಗುಂಪಿನಲ್ಲಿ ಕೊಲ್ಕತ್ತಾದ ರೈಲುಗಳಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ದೃಷ್ಟಿ ವಿಕಲಚೇತನ ಕುಟುಂಬವೊಂದು ಸೇರಿದ್ದು, ತಮಗೆ ತಕ್ಷಣವೇ ಗಡಿ ದಾಟಲು ಅನುಮತಿ ನೀಡಬೇಕೆಂದು ವಿನಂತಿಸುತ್ತಿದೆ.
ಹಕೀಂಪುರ ಗಡಿಗೆ ಆಗಮಿಸುತ್ತಿರುವ ವಲಸಿಗರನ್ನು ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ತಾತ್ಕಾಲಿಕ ಬಂಧನ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸದ್ಯ ಜಿಲ್ಲೆಯ ತೆಂತುಲಿಯಾದಲ್ಲಿರುವ 'ಪಥೇರ್ ಸಾಥಿ' ಸರ್ಕಾರಿ ಕಟ್ಟಡದಲ್ಲಿ ಅತಿ ದೊಡ್ಡ ತಾತ್ಕಾಲಿಕ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಈಗಾಗಲೇ 116 ಬಾಂಗ್ಲಾದೇಶಿಗರಿಗೆ ಆಶ್ರಯ ನೀಡಲಾಗಿದೆ. ಇವರ ಭದ್ರತೆ, ಊಟ ಹಾಗೂ ವೈದ್ಯಕೀಯ ಆರೈಕೆಗಾಗಿ ಆರೋಗ್ಯ ಇಲಾಖೆಯ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಧಿಕಾರಿಗಳ ಮೂಲ ಯೋಜನೆಯ ಪ್ರಕಾರ, ಗಡಿಯಲ್ಲಿ ಜಮಾಯಿಸಿದವರನ್ನು ಹಂತ-ಹಂತವಾಗಿ ಬಾಂಗ್ಲಾದೇಶಕ್ಕೆ 'ಪುಶ್ ಬ್ಯಾಕ್' (ಗಡಿ ಆಚೆಗೆ ಕಳುಹಿಸುವುದು) ಮಾಡಬೇಕಿತ್ತು. ಆದರೆ, ಪ್ರಸ್ತುತ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಅಧಿಕೃತ ಭಾರತೀಯ ಪ್ರಯಾಣ ದಾಖಲೆಗಳಿಲ್ಲದ ವಲಸಿಗರನ್ನು ನೇರವಾಗಿ ಸ್ವೀಕರಿಸಲು ಬಾಂಗ್ಲಾದೇಶದ ಗಡಿ ರಕ್ಷಣಾ ಅಧಿಕಾರಿಗಳು ಸದ್ಯಕ್ಕೆ ನಿರಾಕರಿಸಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಈ ಇಡೀ ಬೆಳವಣಿಗೆ ಹಾಗೂ ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಕುರಿತು ಗಡಿ ಭದ್ರತಾ ಪಡೆ (BSF) ಈವರೆಗೆ ಯಾವುದೇ ಅಧಿಕೃತ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.