ಹೈದರಬಾದ್ : ದೇಶದಲ್ಲಿ ಏಕಕಾಲದಲ್ಲಿ ಎರಡು ವ್ಯತಿರಿಕ್ತ ಹವಾಮಾನ ಮಾದರಿಗಳು ಗೋಚರಿಸುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಒಂದೆಡೆ ಉತ್ತರದ ಬಯಲು ಪ್ರದೇಶಗಳಲ್ಲಿ ತೀವ್ರ ಶಾಖದ ಅಲೆ ಜನರನ್ನು ಸುಡುತ್ತಿದ್ದರೆ, ಮತ್ತೊಂದೆಡೆ ಹಲವು ರಾಜ್ಯಗಳಲ್ಲಿ ಮುಂಗಾರು ಪೂರ್ವ ಮಳೆ ತೀವ್ರಗೊಳ್ಳುತ್ತಿದೆ. ಮುಂದಿನ 12 ಗಂಟೆಗಳಲ್ಲಿ ದೇಶದ 14 ರಾಜ್ಯಗಳಲ್ಲಿ ಗುಡುಗು ಸಹಿತ ಮಳೆ, ಮಿಂಚು ಮತ್ತು ಗಂಟೆಗೆ 70 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಉತ್ತರ ಭಾರತದಾದ್ಯಂತ ತೀವ್ರ ಶಾಖದ ತಲ್ಲಣ ಮುಂದುವರಿದಿದೆ. ರಾಜಧಾನಿ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಭಾರತದ ಹಲವು ಭಾಗಗಳು ತೀವ್ರ ಬಿಸಿಗಾಳಿಗೆ ತುತ್ತಾಗಿದ್ದು, ನಗರಗಳಲ್ಲಿ ತಾಪಮಾನವು 46 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ವಾಯುವ್ಯ ದಿಕ್ಕಿನಿಂದ ಬೀಸುವ ಒಣ ಗಾಳಿ ಮತ್ತು ಥಾರ್ ಮರುಭೂಮಿಯ ಬಿಸಿ ಗಾಳಿಯಿಂದಾಗಿ ದೆಹಲಿಗೆ ಮುಂದಿನ ಕೆಲವು ದಿನಗಳವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿನ ಗರಿಷ್ಠ ತಾಪಮಾನ 44 ರಿಂದ 46 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದ್ದು, ಸೂರ್ಯಾಸ್ತದ ನಂತರವೂ ತಾಪಮಾನ ತಗ್ಗದ "ಬೆಚ್ಚಗಿನ ರಾತ್ರಿ" ಪರಿಸ್ಥಿತಿ ಮುಂದುವರಿಯಲಿದೆ. ಇದೇ ವೇಳೆ, ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ 48 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ದಾಖಲಾಗುವ ಮೂಲಕ ದೇಶದ ಅತ್ಯಂತ ಬಿಸಿಯಾದ ಸ್ಥಳವಾಗಿ ಹೊರಹೊಮ್ಮಿದೆ. ತೀವ್ರ ಶಾಖದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತಂಪಾಗಿಸುವ ಉಪಕರಣಗಳ ಬಳಕೆ ಹೆಚ್ಚಾಗಿದ್ದು, ವಿದ್ಯುತ್ ಬೇಡಿಕೆ ದಾಖಲೆಯ 8,231 ಮೆಗಾವ್ಯಾಟ್ಗೆ ತಲುಪಿದೆ. ಇದು ಮುಂದಿನ ದಿನಗಳಲ್ಲಿ 9,000 ಮೆಗಾವ್ಯಾಟ್ ದಾಟುವ ಸಾಧ್ಯತೆಯಿದೆ.
ಇನ್ನೊಂದೆಡೆ, ಪೂರ್ವ ಮಾನ್ಸೂನ್ ಚುರುಕುಗೊಳ್ಳುತ್ತಿರುವುದರಿಂದ ಪೂರ್ವ, ಈಶಾನ್ಯ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಅಸ್ಥಿರ ಹವಾಮಾನ ಕಂಡುಬಂದಿದೆ. ಹಿಮಾಲಯದ ಅಡಿಯ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಬಿಹಾರ ಮತ್ತು ಕಣಿವೆ ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಗಂಟೆಗೆ 50 ರಿಂದ 70 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗಲಿದ್ದು, ಪಾಟ್ನಾ, ಪೂರ್ಣಿಯಾ ಮತ್ತು ಮುಜಫರ್ಪುರಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದೆ.
ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ದಕ್ಷಿಣ ಕರ್ನಾಟಕದಲ್ಲಿ ಮುಂಗಾರು ಋತು ಸಮೀಪಿಸುತ್ತಿದ್ದಂತೆ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯ ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ. ಮುಂದಿನ 3-4 ದಿನಗಳಲ್ಲಿ ನೈಋತ್ಯ ಮಾನ್ಸೂನ್ ಅರೇಬಿಯನ್ ಸಮುದ್ರದ ಉತ್ತರದ ಕಡೆಗೆ ಚಲಿಸಲಿದೆ ಎಂದು ಐಎಂಡಿ ತಿಳಿಸಿದೆ.
ಈ ತೀವ್ರ ಹವಾಮಾನ ಬದಲಾವಣೆಗಳ ನಡುವೆ, ಐಎಂಡಿಯ ಮಾಜಿ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಆನಂದ್ ಶರ್ಮಾ ಅವರು ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಸಾರ್ವಜನಿಕರು, ವಿಶೇಷವಾಗಿ ಗರ್ಭಿಣಿಯರು, ವೃದ್ಧರು, ಮಕ್ಕಳು ಮತ್ತು ಅನಾರೋಗ್ಯ ಪೀಡಿತರು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3:30 ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.