image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕೇರಳ ಸಿಎಂ ಆಯ್ಕೆ ಕಸರತ್ತು: ಮೂವರು ಘಟಾನುಘಟಿಗಳ ನಡುವೆ ತೀವ್ರ ಪೈಪೋಟಿ, ಹೈಕಮಾಂಡ್‌ಗೆ ತಲೆನೋವಾದ 'ಕೈ' ನಾಯಕತ್ವ

ಕೇರಳ ಸಿಎಂ ಆಯ್ಕೆ ಕಸರತ್ತು: ಮೂವರು ಘಟಾನುಘಟಿಗಳ ನಡುವೆ ತೀವ್ರ ಪೈಪೋಟಿ, ಹೈಕಮಾಂಡ್‌ಗೆ ತಲೆನೋವಾದ 'ಕೈ' ನಾಯಕತ್ವ

ತಿರುವನಂತಪುರಂ : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ 140 ಕ್ಷೇತ್ರಗಳ ಪೈಕಿ 102 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಸಾಧಿಸಿದ್ದರೂ, ಮುಖ್ಯಮಂತ್ರಿ ಗಾದಿಗೆ ಯಾರನ್ನು ಕೂರಿಸಬೇಕು ಎಂಬ ಗೊಂದಲ ಮಾತ್ರ ಇನ್ನೂ ಬಗೆಹರಿದಿಲ್ಲ. ನೆರೆಯ ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಈಗಾಗಲೇ ನೂತನ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿದ್ದರೂ, ಕೇರಳದಲ್ಲಿ ಮಾತ್ರ ನಾಯಕತ್ವದ ಕಗ್ಗಂಟು ಮುಂದುವರೆದಿದೆ.

​ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ವಿ.ಡಿ. ಸತೀಶನ್ ಅವರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಈ ಮೂವರು ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದರೂ ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಕೆಪಿಸಿಸಿ ಅಧ್ಯಕ್ಷೆ ಸನ್ನಿ ಜೋಸೆಫ್ ಮತ್ತು ಕೇರಳ ಉಸ್ತುವಾರಿ ದೀಪಾ ದಾಸ್ಮುನ್ಶಿ ಅವರ ಸಮ್ಮುಖದಲ್ಲಿ ಸಭೆಗಳು ನಡೆದಿದ್ದು, ಅಂತಿಮವಾಗಿ ಸೋನಿಯಾ ಗಾಂಧಿ ಅವರ ಸಲಹೆ ಪಡೆದ ಬಳಿಕವಷ್ಟೇ ಹೈಕಮಾಂಡ್ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

​ರಾಜ್ಯದಲ್ಲಿ ಈಗಾಗಲೇ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಪೋಸ್ಟರ್ ವಾರ್ ಹಾಗೂ ಶಕ್ತಿ ಪ್ರದರ್ಶನಗಳು ನಡೆದಿದ್ದು, ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂಬ ಆತಂಕ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಅತೃಪ್ತಿ ಶಮನಗೊಳಿಸಲು ಹೈಕಮಾಂಡ್ ತಂತ್ರ ರೂಪಿಸುತ್ತಿದೆ. ಅತ್ತ ಭಾರಿ ಬಹುಮತ ನೀಡಿದರೂ ನಾಯಕನನ್ನು ಆಯ್ಕೆ ಮಾಡುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಯುಡಿಎಫ್ ಮೈತ್ರಿಕೂಟದ ಇತರ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಒಟ್ಟಾರೆ, ದೇವರ ನಾಡಿನ ಮುಂದಿನ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಈಗ ಇಡೀ ದೇಶದ ಗಮನ ಸೆಳೆದಿದೆ.

Category
ಕರಾವಳಿ ತರಂಗಿಣಿ