image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಸ್ಪಷ್ಟನೆ ಕೇಳಿದ ತರೂರ್

ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಸ್ಪಷ್ಟನೆ ಕೇಳಿದ ತರೂರ್

ನವದೆಹಲಿ : ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಹಿಳಾ ಮೀಸಲಾತಿ ಮಸೂದೆ ತಿದ್ದುಪಡಿಗಳ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಗುರುವಾರ ಆಗ್ರಹಿಸಿದ್ದಾರೆ. ಏಪ್ರಿಲ್ 16 ರಿಂದ ವಿಶೇಷ ಸಂಸತ್ ಅಧಿವೇಶನ ಆರಂಭವಾಗಲಿದ್ದರೂ, ವಿರೋಧ ಪಕ್ಷಗಳಿಗೆ ಇನ್ನೂ ತಿದ್ದುಪಡಿಯ ಕರಡು ಪ್ರತಿಯನ್ನು ನೀಡಿಲ್ಲ ಎಂದು ಅವರು ಹೇಳಿದ್ದಾರೆ. 'ನಮಗೆ ಇನ್ನೂ ಬಿಲ್‌ನ ಡ್ರಾಫ್ಟ್ ಸಿಕ್ಕಿಲ್ಲ. ಏಪ್ರಿಲ್ 16ಕ್ಕೆ ಸಂಸತ್ ಅಧಿವೇಶನ ಕರೆಯುವ ಯೋಜನೆ ಇದೆ ಎಂದು ನನಗೆ ತಿಳಿದಿದೆ. ಆದರೆ, ಅವರು ಏನು ಪ್ರಸ್ತಾಪಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಆ ಬಿಲ್ ಅನ್ನು ನೋಡಲೇಬೇಕು. ಇದರಿಂದ ಒಕ್ಕೂಟ ವ್ಯವಸ್ಥೆ, ಶಾಸಕಾಂಗ ಮತ್ತು ಸಂಸತ್ತಿನ ಕಾರ್ಯವೈಖರಿ ಮೇಲೆ ಆಗುವ ಪರಿಣಾಮಗಳನ್ನು ನಾವು ಅರಿಯಬೇಕಿದೆ. ಲೋಕಸಭೆ ಸೀಟುಗಳು 800ಕ್ಕೂ ಹೆಚ್ಚಾದರೆ, ಎಲ್ಲರಿಗೂ ಮಾತನಾಡಲು ಅವಕಾಶ ಸಿಗುತ್ತದೆಯೇ? ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಆಗಬೇಕಿದೆ' ಎಂದು ತರೂರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷವು ಏಪ್ರಿಲ್ 10 ರಂದು ದೆಹಲಿಯಲ್ಲಿ ತನ್ನ ಕಾರ್ಯಕಾರಿ ಸಮಿತಿ (CWC) ಸಭೆಯನ್ನು ಕರೆಯಲಿದೆ. ಮುಂಬರುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು 'ನಾರಿ ಶಕ್ತಿ ವಂದನ್ ಕಾಯ್ದೆ'ಗೆ ತಿದ್ದುಪಡಿಗಳನ್ನು ಮಂಡಿಸಲು ಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.

ಪ್ರಸ್ತಾವಿತ ಬದಲಾವಣೆಗಳ ಪ್ರಕಾರ, ಮಹಿಳಾ ಮೀಸಲಾತಿಯನ್ನು ಬಾಕಿ ಇರುವ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯಿಂದ ಬೇರ್ಪಡಿಸಿ, 2011ರ ಜನಗಣತಿ ಮಾಹಿತಿಯನ್ನೇ ಬಳಸಿಕೊಂಡು ಜಾರಿಗೊಳಿಸುವ ಸಾಧ್ಯತೆಯಿದೆ. ಇದು ಜಾರಿಯಾದರೆ, ಲೋಕಸಭೆಯ ಬಲವು 543 ರಿಂದ ಸುಮಾರು 816 ಸ್ಥಾನಗಳಿಗೆ ಹೆಚ್ಚಾಗಬಹುದು. ಇದರಲ್ಲಿ ಮೂರನೇ ಒಂದು ಭಾಗ, ಅಂದರೆ ಸುಮಾರು 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಇದಕ್ಕಾಗಿ ಪ್ರತ್ಯೇಕ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಸಹ ಮಂಡಿಸುವ ನಿರೀಕ್ಷೆಯಿದೆ. ಈ ಎರಡೂ ಕ್ರಮಗಳನ್ನು ಜಾರಿಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಎಸ್‌ಸಿ/ಎಸ್‌ಟಿ ಮೀಸಲಾತಿ ಮುಂದುವರಿಯಲಿದ್ದು, ಸದ್ಯದ ಚೌಕಟ್ಟಿನಲ್ಲಿ ಒಬಿಸಿ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಅಲ್ಲದೆ, ಈ ಪ್ರಕ್ರಿಯೆಯಲ್ಲಿ ರಾಜ್ಯಗಳ ನೇರ ಪಾಲ್ಗೊಳ್ಳುವಿಕೆ ಸೀಮಿತವಾಗಿರಲಿದೆ.

Category
ಕರಾವಳಿ ತರಂಗಿಣಿ