ಅಯೋಧ್ಯೆ : ಅಯೋಧ್ಯೆ ರಾಮಮಂದಿರಕ್ಕೆ 800 ಮೀಟರ್ ಸಮೀಪದಲ್ಲಿ ನಿರ್ಮಿಸಿದ್ದ ಬೃಹತ್ ಯಾಗಶಾಲೆಗೆ ಬೆಂಕಿ ಹೊತ್ತಿಕೊಂಡಿದ್ದು, 1 ಎಕರೆ ವಿಸ್ತೀರ್ಣದ ಪೆಂಡಲ್ ಕೆಲವೇ ನಿಮಿಷಗಳಲ್ಲಿ ಸುಟ್ಟು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಯಾರೂ ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಈ ಯಾಗಶಾಲೆಯಲ್ಲಿ 9 ದಿನಗಳ ಲಕ್ಷ್ಮೀ ನಾರಾಯಣ ಮಹಾಯಜ್ಞವನ್ನು ನಡೆಸಲಾಗುತ್ತಿತ್ತು. ಈ ಯಜ್ಞ ಮುಗಿದು ಒಂದೂವರೆ ಗಂಟೆ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಯಾಗ ಮುಗಿದ ಬಳಿಕ ತೆಂಗಿನಕಾಯಿ ಒಡೆಯುವಾಗ ಉಂಟಾದ ಕಿಡಿಯು ಪೆಂಡಲ್ ಬಿದ್ದಿದ್ದು, ಕ್ಷಣಾರ್ಧದಲ್ಲಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ವರದಿಗಳು ಹೇಳಿವೆ. ನಿಖರ ಕಾರಣಕ್ಕೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಚಿವ ದಯಾಶಂಕರ್ ಸಿಂಗ್ ಹೇಳಿದ್ದಾರೆ. ಯಾಗ ಸ್ಥಳದಲ್ಲಿ 1,251 ಹವನ್ ಕುಂಡಗಳಿದ್ದು, ಕೊನೆಯ ದಿನದಂದು 5,000ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಯಾಗ ಮುಗಿದ ಬಳಿಕ ಎಲ್ಲರೂ ಹೊರಟು ಹೋಗಿದ್ದರಿಂದ ದೊಡ್ಡ ದುರಂತ ತಪ್ಪಿದೆ ಎಂದು ಹೇಳಿದ್ದಾರೆ. ಈ ಯಾಗದಲ್ಲಿ 50,000ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.