ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ನಡೆದ ಎಐ ಸ್ಟಾರ್ಟಪ್ಗಳ ಸಭೆ, ಅದರಲ್ಲಿ ಭಾಗವಹಿಸಿದವರೆಲ್ಲರ ಹೃದಯ ಹಗುರಾಗಿಸಿದೆ. ಎಐ ವಿಚಾರದಲ್ಲಿ ಪ್ರಧಾನಿ ಹೊಂದಿರುವ ದೃಷ್ಟಿಕೋನ, ನಿಲುವು ಏನು ಎಂಬುದು ಭಾರತೀಯ ಸ್ಟಾರ್ಟಪ್ಗಳ ಮುಖ್ಯಸ್ಥರ ಅರಿವಿಗೆ ಬಂದಿತ್ತು. ಫೆಬ್ರುವರಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಪ್ರಧಾನಿಗಳು 12 ಸ್ಟಾರ್ಟಪ್ಗಳ ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆಸಿ ವಿಚಾರ ವಿನಿಮಯ ಮಾಡಿದ್ದಾರೆ. ಪ್ರಧಾನಿಯನ್ನು ಭೇಟಿ ಮಾಡಿರುವ ಎಐ ಸ್ಟಾರ್ಟಪ್ಗಳು ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಫೌಂಡೇಶನ್ ಮಾಡಲ್ಗಳನ್ನು ಅಭಿವೃದ್ಧಿಪಡಿಸಲು ಆಯ್ಕೆಯಾಗಿರುವಂಥವಾಗಿವೆ. ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್, ರಾಜ್ಯ ಸಚಿವರಾದ ಜಿತಿನ್ ಪ್ರಸಾದ, ಕಾರ್ಯದರ್ಶಿ ಎಸ್ ಕೃಷ್ಣನ್ ಹಾಗೂ ಈ 12 ಸ್ಟಾರ್ಟಪ್ಗಳ ಮುಖಂಡರು ಪ್ರಧಾನಿಗಳೊಂದಿಗೆ ಮಾತನಾಡಿದ್ದಾರೆ. ಈ ಮಾತುಕತೆ ಸಕಾರಾತ್ಮಕವಾಗಿತ್ತು ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿಗಳು ತಮ್ಮ ನಿಜಜೀವನದ ಅನುಭವಗಳೊಂದಿಗೆ ಮಾತನಾಡಿದ್ದು ನಮಗೆ ತಾಂತ್ರಿಕ ವಿಷಯಗಳ ಬಗ್ಗೆ ಪ್ರೇರಣೆ ಕೊಟ್ಟಿತು ಎಂದು ಸರ್ವಂ ಎಐ ಸಹ-ಸಂಸ್ಥಾಪಕ ಡಾ. ಪ್ರತ್ಯೂಶ್ ಕುಮಾರ್ ಹೇಳಿದ್ದಾರೆ. ಪ್ರಧಾನಿಯವರಿಗೆ ತಾನು ಏನು ಹೇಳುತ್ತಿದ್ದೇನೆ ಎನ್ನುವ ಸ್ಪಷ್ಟ ಅರಿವು ಇದೆ. ಭಾರತ ಎಐನಲ್ಲಿ ವಿಶ್ವಗುರು ಆಗಬೇಕಾದರೆ ವಿಶ್ವಕ್ಕೆ ಯಾವುದನ್ನು ಪರಿಹರಿಸಲು ಸಾಧ್ಯವಿಲ್ಲವೋ ಆ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ. ಅವರೊಂದಿಗೆ ಮಾತನಾಡಿದ್ದು ಖುಷಿಯಾಯಿತು ಎಂದು ಟೆಕ್ ಮಹೀಂದ್ರ ಸಿಇಒ ನಿಖಿಲ್ ಮಲ್ಹೋತ್ರಾ ಹರ್ಷ ವ್ಯಕ್ತಪಡಿಸಿದ್ದಾರೆ.