ನವದೆಹಲಿ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೇಂದ್ರ ಬಜೆಟ್ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾಡಿಕೆಯಂತೆ ಫೆ.1ರಂದೇ ಮಂಡಿಸಲಿದ್ದಾರೆ. ಇದರೊಂದಿಗೆ ಈ ಸಲ ಭಾನುವಾರ ಮಂಡನೆಯ ಕುರಿತಾಗಿ ಇದ್ದಿದ್ದ ಅನುಮಾನಗಳಿಗೆ ಸರ್ಕಾರ ತೆರೆ ಎಳೆದಿದೆ. ಈ ವರ್ಷ ಫೆ.1 ಭಾನುವಾರ. ಜೊತೆಗೆ ಅದೇ ದಿನ ಗುರು ರವಿದಾಸರ ಜಯಂತಿಯೂ ಬಂದಿದೆ. ಹಾಗಾಗಿ ಅಂದು ಬಜೆಟ್ ಮಂಡನೆಯಾಗುತ್ತದೆಯೋ ಅಥವಾ ಫೆ.2ರಂದು ಮಂಡಿಸಲಾಗುವುದೋ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಕೇಂದ್ರ ಸರ್ಕಾರ ಸಂಪ್ರದಾಯ ಮುರಿಯದಿರಲು ನಿರ್ಧರಿಸಿದೆ. ಫೆ.1ರಂದು ಮಂಡಿಸುವ ಸಂಪ್ರದಾಯ ಆರಂಭವಾದ ನಂತರ ಮೊದಲ ಬಾರಿ ಭಾನುವಾರ ಮಂಡನೆ ಆಗುತ್ತಿದೆ. ಜ.28ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದಾದ ಎರಡು ದಿನಗಳ ಬಳಿಕ ಸಚಿವೆ ನಿರ್ಮಲಾ ದಾಖಲೆಯ 9ನೇ ಬಜೆಟ್ ಮಂಡಿಸಲಿದ್ದಾರೆ.