image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

JDU ಚುನಾವಣಾ ಭರವಸೆಯನ್ನು ಈಡೇರಿಸಿದರೆ ನಾನು ರಾಜಕೀಯ ತೊರೆಯುತ್ತೇನೆ: ಪ್ರಶಾಂತ್ ಕಿಶೋರ್

JDU ಚುನಾವಣಾ ಭರವಸೆಯನ್ನು ಈಡೇರಿಸಿದರೆ ನಾನು ರಾಜಕೀಯ ತೊರೆಯುತ್ತೇನೆ: ಪ್ರಶಾಂತ್ ಕಿಶೋರ್

ಬಿಹಾರ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ವಿಧಾನಸಭಾ ಚುನಾವಣೆಗೆ ಮೊದಲು ಪ್ರತಿ ಕ್ಷೇತ್ರದಲ್ಲಿ ಪ್ರಚಾರ ಮಾಡುವ ವೇಳೆ 10,000 ರಿಂದ 60,000 ಫಲಾನುಭವಿಗಳಿಗೆ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅದನ್ನು ನೀಡದಿದ್ದರೆ ಮತ್ತು ಸ್ವಯಂ ಉದ್ಯೋಗ ಉಪಕ್ರಮಗಳ ಅಡಿಯಲ್ಲಿ ರಾಜ್ಯಾದ್ಯಂತ 1.5 ಕೋಟಿ ಮಹಿಳೆಯರಿಗೆ 2 ಲಕ್ಷ ರೂ.ಗಳ ಭರವಸೆ ನೀಡದೆ ಇರುತ್ತಿದ್ದರೆ ಇಂದು ಜೆಡಿಯು ಕೇವಲ 25 ಸ್ಥಾನ ಗಳಿಸಿ ಸೋಲುತ್ತಿತ್ತು ಎಂದು ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಪಾಟ್ನಾದಲ್ಲಿ ಮಾತನಾಡಿದ ಅವರು, ತಮ್ಮ ಜನ ಸುರಾಜ್ ಪಕ್ಷವು ಪ್ರಾಮಾಣಿಕ ಪ್ರಯತ್ನ ಮಾಡಿತು. ಆದರೆ ಚುನಾವಣೆಯಲ್ಲಿ ಒಂದು ಗುರುತು ಮೂಡಿಸಲು ವಿಫಲವಾಯಿತು ಮತ್ತು ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ತಾನು ವಹಿಸಿಕೊಂಡಿದ್ದೇನೆ ಎಂದು ಹೇಳಿದರು. 'ವೋಟ್ ಚೋರಿ' (ಮತಗಳ ಕಳ್ಳತನ) ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತದೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದ ಪ್ರಶಾಂತ್ ಕಿಶೋರ್, ರಾಷ್ಟ್ರೀಯ ವಿರೋಧ ಪಕ್ಷಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕು ಮತ್ತು ಅಗತ್ಯವಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಬೇಕೆಂದು ಒತ್ತಾಯಿಸಿದರು.

ನಮಗೆ ಹಿನ್ನಡೆಯಾಗಿದೆ ಆದರೆ ನಾವು ತಪ್ಪುಗಳನ್ನು ಸರಿಪಡಿಸುತ್ತೇವೆ. ನಮ್ಮನ್ನು ನಾವು ಮತ್ತೆ ರಾಜಕೀಯವಾಗಿ ನಿರ್ಮಿಸಿಕೊಂಡು ಬಲವಾಗಿ ಮತ್ತೆ ಬರುತ್ತೇವೆ. ನಮಗೆ ಹಿಂದೆ ಸರಿಯುವ ಯಾವುದೇ ಮಾರ್ಗವಿಲ್ಲ ಎಂದು ಅವರು ಪ್ರತಿಪಾದಿಸಿದರು. ಜಾತಿ ಮತ್ತು ಧಾರ್ಮಿಕ ಆಧಾರದ ಮೇಲೆ ಜನರನ್ನು ವಿಭಜಿಸಿ ಹಣ ಬಳಸಿ ಜನರ ಮತಗಳನ್ನು ಖರೀದಿಸಿದ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರಂತೆ ಬಿಹಾರವನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲರಾದೆವು ಎಂದರು. ಮತಗಳನ್ನು ಪಡೆಯದಿರುವುದು ಅಪರಾಧವಲ್ಲ. ನಾನು ಭ್ರಷ್ಟಾಚಾರ ಅಥವಾ ವಿಭಜಕ ರಾಜಕೀಯದಲ್ಲಿ ತೊಡಗಿಲ್ಲ ಎಂಬುದೇ ಖುಷಿಯ ವಿಚಾರ. ಎನ್‌ಡಿಎ ಸರ್ಕಾರ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಿದರೆ ಮತ್ತು ಸ್ವ-ಉದ್ಯೋಗ ಉಪಕ್ರಮಗಳ ಅಡಿಯಲ್ಲಿ ತಲಾ 1.5 ಕೋಟಿ ಮಹಿಳೆಯರಿಗೆ ತಲಾ 2 ಲಕ್ಷ ರೂ.ಗಳನ್ನು ನೀಡಿದರೆ, ರಾಜಕೀಯವನ್ನು ಖಂಡಿತವಾಗಿಯೂ ತ್ಯಜಿಸುತ್ತೇನೆ ಎಂದು ಕಿಶೋರ್ ಹೇಳಿದರು. ಜನರು ಎನ್‌ಡಿಎಗೆ ಜನಾದೇಶ ನೀಡಿದ್ದಾರೆ, ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾ‌ರ್ ಅವರ ಚುನಾವಣಾ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುವುದು ಅವರ ಹೆಗಲ ಮೇಲಿದೆ ಎಂದು ಹೇಳಿದರು. ಸ್ವ-ಉದ್ಯೋಗ ಬಹಳ ಮುಖ್ಯ; ಅವರು ಭರವಸೆ ನೀಡಿದ 2 ಲಕ್ಷ ರೂ.ಗಳನ್ನು ನೀಡಬೇಕು. ಆರು ತಿಂಗಳೊಳಗೆ ಹಣ ಸಿಗದ ಜನರು ಜನ್ ಸುರಾಜ್‌ಗೆ ಬರಬಹುದು, ಅವರಿಗೆ ಮೊತ್ತ ಸಿಗುವಂತೆ ನೋಡಿಕೊಳ್ಳಲು ನಾವು ಹೋರಾಡುತ್ತೇವೆ ಎಂದು ಹೇಳಿದರು. ನವೆಂಬರ್ 20 ರಂದು ಪಶ್ಚಿಮ ಚಂಪಾರಣ್‌ ಜಿಲ್ಲೆಯ ಬಿತಿಹರ್ವಾದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು. ಆಗ ಹೊಸ ಎನ್‌ಡಿಎ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

Category
ಕರಾವಳಿ ತರಂಗಿಣಿ