ಜಮ್ಮು ಕಾಶ್ಮೀರ: ಕಣಿವೆ ನಾಡಿನಲ್ಲಿ ಭಾರಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಇಂದು ಅಮರನಾಥ ಯಾತ್ರೆಯನ್ನು ಮತ್ತೊಮ್ಮೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಹಲ್ಗಾಮ್ ಮತ್ತು ಬಲ್ತಾಲ್ನ ಬೇಸ್ ಕ್ಯಾಂಪ್ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಡಿಐಪಿಆರ್, ಪಹಲ್ಗಾಮ್ ಮತ್ತು ಬಲ್ತಾಲ್ ಮಾರ್ಗವಾಗಿ ಸಾಗುವ ಅಮರನಾಥ ಯಾತ್ರೆಯನ್ನು ಇಂದು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ವಲಯ ಆಯುಕ್ತ ವಿಜಯ್ ಕುಮಾರ್ ಬಿಧುರಿ ಮಾತನಾಡಿ, "ಬುಧವಾರ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಎರಡು ಬೇಸ್ ಕ್ಯಾಂಪ್ಗಳಿಂದ ಹೊರಡಬೇಕಿದ್ದ ಯಾತ್ರಾರ್ಥಿಗಳ ಟ್ರಕ್ಗಳು ಪ್ರಯಾಣ ಕೈಗೊಂಡಿಲ್ಲ. ಯಾತ್ರಿಗಳ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ. ಈ ಬಾರಿಯ ಅಮರನಾಥ ಯಾತ್ರೆಯು ಈಗ ಎರಡನೇ ಬಾರಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಹಿಂದೆ ಜುಲೈ 9ರಂದು ಕೂಡ ಭಾರೀ ಮಳೆ ಹಿನ್ನೆಲೆಯಲ್ಲಿ ಯಾತ್ರೆಯನ್ನು ಸ್ಥಗಿತ ಮಾಡಲಾಗಿತ್ತು" ಎಂದು ತಿಳಿಸಿದರು.
ಡಿಐಪಿಆರ್ ಪ್ರಕಾರ, ಜುಲೈ 3ರಿಂದ ಯಾತ್ರೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 3.93 ಲಕ್ಷ ಯಾತ್ರಿಕರು ಹಿಮಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರಾ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಮೂಲ ಶಿಬಿರಗಳಿಂದ ಯಾತ್ರಾರ್ಥಿಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 31ರಂದು ಜಮ್ಮುವಿನ ಭಗವತಿ ನಗರದಿಂದ ಬಲ್ತಾಲ್, ನುನ್ವಾನ್ ಹಾಗೂ ಪಹಲ್ಗಾಮ್ ಮೂಲ ಶಿಬಿರಗಳ ಕಡೆಗೆ ಯಾವುದೇ ಬೆಂಗಾವಲು ಸಂಚಾರಕ್ಕೆ ಅನುಮತಿಸದಿರಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 3ರಿಂದ ಪ್ರಾರಂಭವಾದ ಅಮರನಾಥ ಯಾತ್ರೆಗೆ ಈ ಬಾರಿ 4 ಲಕ್ಷ ಜನರು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. 38 ದಿನಗಳ ವರೆಗೆ ನಡೆಯುವ ಪವಿತ್ರ ಯಾತ್ರೆಯು ಆಗಸ್ಟ್ 9ರಂದು ಮುಕ್ತಾಯವಾಗಲಿದೆ.