ಉತ್ತರ ಪ್ರದೇಶ : ಮತಾಂತರ ಆಗದೆ ವಿವಿಧ ಧರ್ಮಗಳ ಜನರ ನಡುವೆ ನಡೆಯುವ ವಿವಾಹ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಸೋನು ಅಲಿಯಾಸ್ ಸಹನೂರ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಪ್ರಶಾಂತ್ ಅವರಿದ್ದ ಪೀಠ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆರ್ಯ ಸಮಾಜದ ದೇವಸ್ಥಾನದಲ್ಲಿ ಮದುವೆಯಾದ ವ್ಯಕ್ತಿಯ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿತು. ಅಪ್ರಾಪ್ತ ಬಾಲಕಿಯ ಮದುವೆ ಕುರಿತು ಆರ್ಯ ಸಮಾಜ ದೇವಸ್ಥಾನದಿಂದ ವಿವಾಹ ಪ್ರಮಾಣಪತ್ರ ನೀಡಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ.
ಆರ್ಯ ಸಮಾಜ ಸಂಸ್ಥೆಗಳು ಅಪ್ರಾಪ್ತರನ್ನು ಒಳಗೊಂಡು ನಡೆಯುತ್ತಿರುವ ಮದುವೆಗಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡುತ್ತಿರುವ ಬಗ್ಗೆ ಡಿಸಿಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಲು ನ್ಯಾಯಾಲಯ ರಾಜ್ಯ ಗೃಹ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ಮಹಾರಾಜ್ಗಂಜ್ನ ನಿಚ್ಲೌಲ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ಅಪಹರಣ, ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರ ಆರೋಪಪಟ್ಟಿಯನ್ನು ಪರಿಗಣಿಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಅರ್ಜಿದಾರರು ಪೀಠಕ್ಕೆ ತಿಳಿಸಿದರು.
ನಾನು ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾದ ಕನ್ಯೆ ಈಗ ವಯಸ್ಕಳಾಗಿದ್ದಾಳೆ. ನಾವು ಈಗ ಒಟ್ಟಿಗೆ ವಾಸಿಸುತ್ತಿದ್ದೇವೆ. ಆದ್ದರಿಂದ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಅರ್ಜಿದಾರರ ವಿರುದ್ಧ ವಾದ ಮಂಡಿಸಿದ ರಾಜ್ಯ ಸರ್ಕಾರದ ಪರ ವಕೀಲರು, ಅರ್ಜಿದಾರರು ಹಾಗೂ ಹುಡುಗಿ ಇಬ್ಬರೂ ವಿಭಿನ್ನ ಧರ್ಮಗಳಿಗೆ ಸೇರಿದವರು. ಮತ್ತು ಇಬ್ಬರೂ ಮತಾಂತರಗೊಂಡಿಲ್ಲ. ಮತಾಂತರವಿಲ್ಲದ ಮದುವೆ ಕಾನೂನುಬಾಹಿರ ಎಂದು ಹೇಳಿದರು. ಆರ್ಯ ಸಮಾಜ ಸಂಸ್ಥೆಗಳು ನಕಲಿ ವಿವಾಹಗಳು ಹಾಗೂ ಅಪ್ರಾಪ್ತರಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ನ್ಯಾಯಾಲಯ ಗಮನಿಸಿದೆ. ಈ ಬಗ್ಗೆ ತನಿಖೆ ನಡೆಸಿ ನಂತರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೈಕೋರ್ಟ್ ಪೀಠ ಹೇಳಿದೆ.