image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಮರನಾಥ ಯಾತ್ರೆ ಮತ್ತೆ ಪುನರಾರಂಭ

ಅಮರನಾಥ ಯಾತ್ರೆ ಮತ್ತೆ ಪುನರಾರಂಭ

ಜಮ್ಮು: ಕಾಶ್ಮೀರದಲ್ಲಿನ ಭಾರಿ ಮಳೆ ಮತ್ತು ಭೂ ಕುಸಿತದಿಂದ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು ಮತ್ತೆ ಪುನರಾರಂಭಗೊಂಡಿದೆ. 7,900 ಯಾತ್ರಿಕರ ಎರಡು ಬ್ಯಾಚ್​ಗಳು​ ಪಹಲ್ಗಾಮ್​ ಮತ್ತು ಬಾಲ್ಟಾಲ್​​ನ​ ಎರಡು ಬೇಸ್​ ಕ್ಯಾಂಪ್​ನಿಂದ ಹಿಮಲಿಂಗ ದರ್ಶನಕ್ಕೆ ತೆರಳಿವೆ. ಭಾರೀ ಮಳೆಯಿಂದ ಉಂಟಾಗಿದ್ದ ಭೂ ಕುಸಿತದಲ್ಲಿ ಓರ್ವ ಮಹಿಳಾ ಯಾತ್ರಿಕರು ಸಾವನ್ನಪ್ಪಿದ್ದರು. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಗುರುವಾರದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಬಿಆರ್​ಒ ಹಾಗೂ ಸೇನಾ ಸಿಬ್ಬಂದಿ ರಸ್ತೆ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು, ಮತ್ತೆ ಯಾತ್ರೆ ಆರಂಭಿಸಲಾಗಿದೆ. ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಅಧಿಕಾರಿಗಳು, ಪಹಲ್ಗಾಮ್​ ಮತ್ತು ಬಾಲ್ಟಾಲ್​ ಎರಡು ಬೇಸ್​ ಕ್ಯಾಂಪ್​ನಿಂದ ಇಂದು ಮತ್ತೆ ಯಾತ್ರೆ ಆರಂಭವಾಗಿದೆ. 7,908 ಯಾತ್ರಿಕರ 16ನೇ ಬ್ಯಾಚ್​ಗೆ ಸಿಆರ್​ಪಿಎಫ್​ ಮತ್ತು ಪೊಲೀಸ್​ ಸಿಬ್ಬಂದಿ ರಕ್ಷಣೆ ಒದಗಿಸಿದ್ದಾರೆ. ಬ್ಯಾಚ್​ನಲ್ಲಿ 5,957 ಪುರುಷರು, 1,613 ಮಹಿಳೆಯರು ಮತ್ತು 26 ಮಕ್ಕಳು ಮತ್ತು 310 ಸಾಧು ಮತ್ತು ಸಾಧ್ವಿಗಳು ಇದ್ದಾರೆ. ಭಗವತಿನಗರದ ಮೂಲ ಶಿಬಿರದಿಂದ 261 ವಾಹನಗಳಲ್ಲಿ ಬೆಳಗಿನ ಜಾವ 3.30ರಿಂದ 4.25ರ ನಡುವೆ ಯಾತ್ರೆ ಪುನಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಮೊದಲ ಯಾತ್ರಿಕರ ತಂಡದಲ್ಲಿ 2,879 ಮಂದಿ ಇದ್ದು, 92 ವಾಹನಗಳಲ್ಲಿ ತಲುಪಿದ್ದಾರೆ. ಇದು ಗಂಡೇರ್ಬಲ್​ ಜಿಲ್ಲೆಯ ಬಾಲ್ಟಾಲ್​ ಮಾರ್ಗದ 14 ಕಿ.ಮೀ ದೂರದ ಪ್ರಯಾಣವಾಗಿದೆ. ಎರಡನೇ ತಂಡದಲ್ಲಿ 5,029 ಯಾತ್ರಿಕರಿದ್ದು, 169 ವಾಹನಗಳ ಮೂಲಕ ಅನಂತ್​ನಾಗ್​ ಜಿಲ್ಲೆಯ ಪಹಲ್ಗಾಮ್​ ಮಾರ್ಗದ 48 ಕಿ.ಮೀ ಪ್ರಯಾಣ ಮಾಡಲಿದ್ದಾರೆ. ಹರ ಹರ ಮಹಾದೇವ ಘೋಷಣೆಗಳ ನಡುವೆ ಯಾತ್ರಿಕರು ಉತ್ಸಾಹದಿಂದ ಯಾತ್ರೆಗೆ ತೆರಳಿದ್ದಾರೆ. ಆನ್​ಲೈನ್​ ನೋಂದಣಿ ಹೊರತಾಗಿ, ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಭಾರಿ ಜನದಟ್ಟಣೆ ಕಂಡು ಬಂದಿದೆ. ಸುಮಾರು 4,000ಕ್ಕೂ ಹೆಚ್ಚು ಯಾತ್ರಿಕರು ನೇರ ನೋಂದಣಿ ಮಾಡಿಕೊಳ್ಳಲು ಜಮ್ಮುವಿಗೆ ಆಗಮಿಸಿದ್ದರು. ಅವರನ್ನು ವಿವಿಧ ವಸತಿ ಕೇಂದ್ರಗಳಲ್ಲಿ ಇರಿಸುವ ವ್ಯವಸ್ಥೆ ಮಾಡಲಾಗಿದೆ. ಜುಲೈ 3ರಿಂದ ಪ್ರಾರಂಭವಾದ ಯಾತ್ರೆಯಲ್ಲಿ ಇದುವರೆಗೆ ಸುಮಾರು 2.50 ಲಕ್ಷ ಯಾತ್ರಿಕರು ಗುಹಾಂತರ ದೇಗುಲದ ಹಿಮಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರೆಗೆ 4 ಲಕ್ಷ ಜನರು ಆನ್​ಲೈನ್​ ಮೂಲಕ ನೋಂದಣಿ ಮಾಡಿದ್ದಾರೆ. 38 ದಿನಗಳ ಸಾಗುವ ಯಾತ್ರೆಯು ಆಗಸ್ಟ್​ 9ರಂದು ಕೊನೆಯಾಗಲಿದೆ.

Category
ಕರಾವಳಿ ತರಂಗಿಣಿ