ಕೋಲ್ಕತ್ತಾ : ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಮಾಜಿ ಶಾಸಕ ನಿರ್ಮಲ್ ಘೋಷ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದ ಈ ದುರಂತದಲ್ಲಿ ಸಂತ್ರಸ್ತೆಯ ಮೃತದೇಹವನ್ನು ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿ ಸಾಕ್ಷ್ಯಗಳನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ತ ವೈದ್ಯೆಯ ಎರಡನೇ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ಅಂತ್ಯಕ್ರಿಯೆಯ ಅನುಮಾನಾಸ್ಪದ ಸಂದರ್ಭಗಳ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಅಂತ್ಯಕ್ರಿಯೆ ಶುಲ್ಕವನ್ನು ಮನ್ನಾ ಮಾಡಿರುವುದು ಹಾಗೂ ಸಂಬಂಧಿತ ದಾಖಲೆಗಳಲ್ಲಿ ಸಂತ್ರಸ್ತೆಯ ಕುಟುಂಬದವರ ಸಹಿ ಇಲ್ಲದಿರುವುದು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು.
ಸಂತ್ರಸ್ತೆಯ ತಂದೆ ನೀಡಿದ ನೂತನ ದೂರಿನ ಆಧಾರದ ಮೇಲೆ ಖರ್ಡಹ ಪೊಲೀಸ್ ಠಾಣೆಯಲ್ಲಿ ಹೊಸ ಎಫ್ಐಆರ್ ದಾಖಲಿಸಲಾಗಿದೆ. ನಿರ್ಮಲ್ ಘೋಷ್ ಅವರ ಮೇಲ್ವಿಚಾರಣೆಯಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ನಡೆಯದಂತೆ ತಡೆಯಲು ಹಾಗೂ ಸಾಕ್ಷ್ಯ ನಶಿಸುವ ಉದ್ದೇಶದಿಂದ ಕುಟುಂಬದ ಸ್ಪಷ್ಟ ಒಪ್ಪಿಗೆಯಿಲ್ಲದೆ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬ್ಯಾರಕ್ಪುರ ಪೊಲೀಸ್ ಕಮಿಷನರೇಟ್ನ ಹಿರಿಯ ಅಧಿಕಾರಿ ನೀಡಿರುವ ಮಾಹಿತಿಯಂತೆ, ಈ ಹೊಸ ಪ್ರಕರಣವು ಸಿಬಿಐ ನಡೆಸುತ್ತಿರುವ ಮೂಲ ತನಿಖೆಯಿಂದ ಪ್ರತ್ಯೇಕವಾಗಿದೆ. ಪನಿಹಾಟಿಯಲ್ಲಿರುವ ಚಿತಾಗಾರದಲ್ಲಿ ಸರದಿಯಲ್ಲಿದ್ದ ಇತರ ಎರಡು ಮೃತದೇಹಗಳನ್ನು ಹಿಂದಿಕ್ಕಿ ವೈದ್ಯೆಯ ಅಂತ್ಯಕ್ರಿಯೆ ನಡೆಸಲಾಗಿತ್ತು ಎಂಬ ಆರೋಪವೂ ಇದೆ. ಅಲ್ಲದೆ ಒಪ್ಪಿಗೆ ಪತ್ರಗಳಲ್ಲಿದ್ದ ಸಹಿಗಳು ಸಂತ್ರಸ್ತೆಯ ಪೋಷಕರದ್ದಲ್ಲ, ಬದಲಿಗೆ ನೆರೆಹೊರೆಯವರದ್ದಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 9, 2024ರಂದು ಆರ್ಜಿ ಕರ್ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ 31 ವರ್ಷದ ವೈದ್ಯೆಯ ಮೃತದೇಹ ಪತ್ತೆಯಾಗಿದ್ದು, ಆಕೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಸಿಬಿಐ ನಡೆಸುತ್ತಿರುವ ಪ್ರತ್ಯೇಕ ತನಿಖೆಯಲ್ಲಿ ಈಗಾಗಲೇ ಒಬ್ಬ ವ್ಯಕ್ತಿ ದೋಷಿ ಎಂದು ತೀರ್ಪಾಗಿದ್ದು, ಪ್ರಕರಣವು ಪ್ರಸ್ತುತ ಕಲ್ಕತ್ತಾ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ.