ಜೈಪುರ : ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (ATS) ಜೈಪುರದಲ್ಲಿ ಭಾರಿ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಮೂಲದ ನಿಷೇಧಿತ ಉಗ್ರಗಾಮಿ ಸಂಘಟನೆ 'ಜೈಶ್-ಎ-ಮೊಹಮ್ಮದ್'ನ (JeM) ಸ್ಲೀಪರ್ ಸೆಲ್ ಜೊತೆ ಸಂಪರ್ಕ ಹೊಂದಿದ್ದ ಗೃಹಿಣಿಯೊಬ್ಬರನ್ನು ಬಂಧಿಸಿದೆ. ಬಂಧಿತ ಮಹಿಳೆಯನ್ನು ಮೂಲತಃ ಗಂಗಾಪುರ ಮೂಲದ, ಪ್ರಸ್ತುತ ಜೈಪುರ ನಿವಾಸಿ ಬಬಿತಾ ಧಾಕಡ್ ಎಂದು ಗುರುತಿಸಲಾಗಿದೆ. ಈಕೆಗೆ 'ಖದೀಜಾ' ಎಂಬ ಮತ್ತೊಂದು ಹೆಸರಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ರಹಸ್ಯ ಮಾಹಿತಿಯ ಆಧಾರದ ಮೇಲೆ ಎಟಿಎಸ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತ ಮಹಿಳೆಯ ಮೊಬೈಲ್ ಫೋನ್ ಅನ್ನು ಪ್ರಾಥಮಿಕವಾಗಿ ಪರಿಶೀಲಿಸಿದಾಗ ಆಘಾತಕಾರಿ ವಿಷಯಗಳು ಹೊರಬಂದಿವೆ. ಆಕೆಯ ಫೋನ್ನಲ್ಲಿ ಎರಡು ಸಿಮ್ ಕಾರ್ಡ್ಗಳಿದ್ದು, ಫೇಸ್ಬುಕ್ ಖಾತೆಯಲ್ಲಿ ದೇಶವಿರೋಧಿ ಹಾಗೂ ಆಕ್ಷೇಪಾರ್ಹ ವಿಷಯಗಳಿದ್ದವು. ಆಕೆಯ ಫೇಸ್ಬುಕ್ ಸ್ನೇಹಿತರ ಪಟ್ಟಿಯಲ್ಲಿ ಜೈಶ್-ಎ-ಮೊಹಮ್ಮದ್ ಸೇರಿದಂತೆ ವಿವಿಧ ಉಗ್ರಗಾಮಿ ಸಂಘಟನೆಗಳ ಧ್ವಜ ಹಾಗೂ ಶಸ್ತ್ರಸಜ್ಜಿತ ವ್ಯಕ್ತಿಗಳ ಫೋಟೋ ಹೊಂದಿದ್ದ ವಿದೇಶಿ ಪ್ರೊಫೈಲ್ಗಳು ಪತ್ತೆಯಾಗಿವೆ. ಇದಲ್ಲದೆ, ಆಕೆಯ ವಾಟ್ಸಾಪ್ ಖಾತೆಯಲ್ಲಿ ಪಾಕಿಸ್ತಾನದ ಹಲವು ನಂಬರ್ಗಳು ಮತ್ತು ವಿದೇಶಿ ಸಂಪರ್ಕಗಳೊಂದಿಗೆ ನಿರಂತರ ಚಾಟ್ ನಡೆಸಿರುವುದು ಪತ್ತೆಯಾಗಿದೆ.
ಪಾಕಿಸ್ತಾನದ ಮೌಲ್ವಿಯೊಬ್ಬ ಫೋನ್ ಮೂಲಕವೇ ಈಕೆಯ ಧರ್ಮಾಂತರ ಪ್ರಕ್ರಿಯೆಗೆ ಪ್ರಚೋದನೆ ನೀಡಿದ್ದ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ಅಬು-ಉಬೈದಾ ಎಂಬಾತ ಈಕೆಯನ್ನು ಮದುವೆಯಾಗಲು ಬಯಸಿದ್ದಾನೆ ಎಂದು ನಂಬಿಸಿದ್ದ ಆ ಮೌಲ್ವಿ, ನಿಯಮಿತವಾಗಿ ಪ್ರಾರ್ಥನೆ ಮಾಡಲು ಮತ್ತು ಕುರಾನ್ ಪಠಿಸಲು ಸೂಚಿಸಿದ್ದ ಎನ್ನಲಾಗಿದೆ. ನಂತರ ಈಕೆಯನ್ನು ನೇಪಾಳ, ಸೌದಿ ಅರೇಬಿಯಾ ಅಥವಾ ಯುಎಇ ಮಾರ್ಗವಾಗಿ ಪಾಕಿಸ್ತಾನಕ್ಕೆ ಕರೆಸಿಕೊಳ್ಳುವ ಸಂಚು ರೂಪಿಸಲಾಗಿತ್ತು ಎಂಬ ಸಂಶಯ ವ್ಯಕ್ತವಾಗಿದೆ.
ಈಕೆಯ ಹೆಸರು ಈ ಹಿಂದಿನ ಕೆಲವು ಪ್ರಮುಖ ಭಯೋತ್ಪಾದನಾ ಪ್ರಕರಣಗಳಲ್ಲೂ ಕೇಳಿಬಂದಿರುವುದು ತನಿಖಾ ಸಂಸ್ಥೆಗಳ ಕಳವಳಕ್ಕೆ ಕಾರಣವಾಗಿದೆ. ಜೈಶ್ ಉಗ್ರ ಮಸೂದ್ ಅಜರ್ನ ಆಪ್ತರು ಹಾಗೂ ಇಂಡಿಯನ್ ಏರ್ಲೈನ್ಸ್ ವಿಮಾನ 814ರ ಹೈಜಾಕ್ ಪ್ರಕರಣದ ನೆಟ್ವರ್ಕ್ ಜೊತೆಗೂ ಈಕೆಗೆ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, 2016ರ ನವೆಂಬರ್ 29ರಂದು ಜಮ್ಮುವಿನ ಬಾಲಿನಿ ವಿಜ್ ಬಳಿಯ ಭಾರತೀಯ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲೂ ಈಕೆಯ ಕೈವಾಡವಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಆ ದಾಳಿಯಲ್ಲಿ ಆರು ಜನ ಭಾರತೀಯ ಸೈನಿಕರು ವೀರಮರಣ ಹೊಂದಿದ್ದರು.
ಈ ಕುರಿತು ಮಾಹಿತಿ ನೀಡಿರುವ ಎಟಿಎಸ್ ಎಸ್ಪಿ ಮನೀಶ್ ತ್ರಿಪಾಠಿ ಅವರು, ತನಿಖೆಯು ಸದ್ಯ ಆರಂಭಿಕ ಹಂತದಲ್ಲಿದ್ದು, ಲಭ್ಯವಿರುವ ಡಿಜಿಟಲ್ ಪುರಾವೆಗಳನ್ನು ಮತ್ತಷ್ಟು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಳೆದ ಆರೇಳು ತಿಂಗಳುಗಳಿಂದ ಉಗ್ರಗಾಮಿ ಸಂಘಟನೆಗಳು ಈಕೆಯನ್ನು ಬಳಸಿಕೊಂಡು ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದವು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯರನ್ನು ಸೆಳೆದು, ಮತಾಂತರದ ಆಮಿಷ ಒಡ್ಡಿ ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳುವ ಜಾಲದ ಬಗ್ಗೆ ಅಧಿಕಾರಿಗಳು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.