ಬಂಟ್ವಾಳ: ಕೆಲಸದ ವಿಚಾರದಲ್ಲಿ ಉಂಟಾದ ತಕರಾರಿನಿಂದಾಗಿ ವ್ಯಕ್ತಿಯೊಬ್ಬನನ್ನು ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದು ಹತ್ಯೆಗೈದ ಘಟನೆ ಬಂಟ್ವಾಳದ ಪಿಲಾತಬೆಟ್ಟು ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೊಲೀಸರು ಆರೋಪಿ ರಾಹುಲ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರದಂತೆ, ಮೇ 31ರ ರಾತ್ರಿ ಪಿಲಾತಬೆಟ್ಟು ನಿವಾಸಿ ಶೇಖರ ಎಂಬವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಶೇಖರ ಅವರ ಸಹೋದರ ಮಧುಸೂದನ್ (37) ಅವರು, ತಮ್ಮ ಸಹೋದರನ ಮಗನಾದ ಆರೋಪಿ ರಾಹುಲ್ ಜೊತೆ ಕೆಲಸದ ವಿಚಾರವಾಗಿ ತಕರಾರು ತೆಗೆದಿದ್ದಾರೆ. ಇದರಿಂದ ಕುಪಿತಗೊಂಡ ರಾಹುಲ್ ಅಲ್ಲಿಂದ ತೆರಳಿದ್ದನು.
ಕಾರ್ಯಕ್ರಮ ಮುಗಿದ ನಂತರ ಮನೆಯ ಸಮೀಪ ಕೂಗಾಟದ ಶಬ್ದ ಕೇಳಿ ಬಂದಿದ್ದು, ಶೇಖರ ಅವರು ಸ್ಥಳಕ್ಕೆ ತೆರಳಿದಾಗ ಆರೋಪಿ ರಾಹುಲ್, ಮಧುಸೂದನ್ ಅವರ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದಿರುವುದು ಬೆಳಕಿಗೆ ಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಧುಸೂದನ್ ಅವರನ್ನು ಕೂಡಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 58/2026 ಹಾಗೂ ಬಿ.ಎನ್.ಎಸ್ (BNS) ಕಲಂ: 103ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ