ವಿಟ್ಲ: ಬಂಟ್ವಾಳ ತಾಲೂಕಿನ ನೇರಳಕಟ್ಟೆಯಲ್ಲಿರುವ ಸಹಕಾರ ಸಂಘವೊಂದರ ಪರಿಶಿಷ್ಠ ಜಾತಿಗೆ ಸೇರಿದ ಮಹಿಳಾ ಸಿಬ್ಬಂದಿಗೆ ಜಾತಿ ನಿಂದನೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಟ್ಲಮುಡ್ನೂರು ನಿವಾಸಿ ಸೇಸಮ್ಮ (47) ಎಂಬುವರು ದೂರು ನೀಡಿದವರಾಗಿದ್ದಾರೆ. ಇವರು ನೇರಳಕಟ್ಟೆಯ ಸಹಕಾರ ಸಂಘದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಏಪ್ರಿಲ್ 2ರಂದು ಕರ್ತವ್ಯದಲ್ಲಿದ್ದಾಗ ಶಾಖೆಯ ಪ್ರಭಾರ ವ್ಯವಸ್ಥಾಪಕ ಯತೀಶ್ ಡಿ. ಗೌಡ ಎಂಬುವರು ಏಕಾಏಕಿ ಬಂದು ಕೆಲಸ ಮಾಡದಂತೆ ತಡೆದಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಾಗ ಆರೋಪಿಯು ಸೇಸಮ್ಮ ಅವರನ್ನು ಕೈಯಿಂದ ತಳ್ಳಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಏಪ್ರಿಲ್ 7ರಂದು ಸೇಸಮ್ಮ ಅವರು ಪುನಃ ಕೆಲಸಕ್ಕೆ ಹಾಜರಾದಾಗಲೂ ಆರೋಪಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಇದರಿಂದ ಮನನೊಂದ ಅವರು ಕಚೇರಿಯಲ್ಲೇ ಅಸ್ವಸ್ಥಗೊಂಡು ಬಿದ್ದಿದ್ದಾರೆ. ತಕ್ಷಣ ಇತರ ಸಿಬ್ಬಂದಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಘದ ಪದಾಧಿಕಾರಿಗಳಾದ ಯಶೋಧ, ಪುಷ್ಪರಾಜ್ ಚೌಟ ಹಾಗೂ ಪ್ರಭಾರ ವ್ಯವಸ್ಥಾಪಕ ಯತೀಶ್ ಡಿ. ಗೌಡ ಎಂಬುವರ ವಿರುದ್ಧ ಏಪ್ರಿಲ್ 11ರಂದು ದೂರು ದಾಖಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Act) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.