ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದ ಬಾರ್ವೊಂದರಲ್ಲಿ ಹಣಕಾಸಿನ ವಿಚಾರವಾಗಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ.
ಕೊಕ್ಕಡ ಗ್ರಾಮದ ನಿವಾಸಿ ಅಕ್ಷಯ್ (31) ಹಲ್ಲೆಗೊಳಗಾದವರು. ದಿನಾಂಕ 29-03-2026 ರಂದು ರಾತ್ರಿ ಅಕ್ಷಯ್ ಅವರು ಕೊಕ್ಕಡದ ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಮದ್ಯ ಸೇವಿಸಲು ಕುಳಿತಿದ್ದಾಗ, ಅಲ್ಲಿಗೆ ಬಂದ ಯತೀಶ್ ಎಂಬಾತ ಹಣಕಾಸಿನ ಹಳೆಯ ವಿಚಾರವನ್ನು ಮುಂದಿಟ್ಟುಕೊಂಡು ತಕರಾರು ತೆಗೆದಿದ್ದಾನೆ.ಈ ವೇಳೆ ಅಕ್ಷಯ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಪಾದಿತ ಯತೀಶ್, ಬಳಿಕ ಹಲ್ಲೆ ನಡೆಸಿದ್ದಾನೆ.
ಇಷ್ಟಕ್ಕೇ ನಿಲ್ಲದೆ, ಯತೀಶ್ ಜೊತೆಗಿದ್ದ ಧನುಷ್ ಭಂಡಾರಿ, ಶರತ್ ಭಂಡಾರಿ ಮತ್ತು ಪ್ರವೀಣ್ ಎಂಬುವವರು ಕೂಡ ಸೇರಿಕೊಂಡು ಅಕ್ಷಯ್ ಮೇಲೆ ಹಲ್ಲೆ ನಡೆಸಿ, ಕೆಟ್ಟ ಭಾಷೆಯಲ್ಲಿ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಾಳು ಅಕ್ಷಯ್ ನೀಡಿದ ದೂರಿನನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 23/2026 ರಂತೆ, ಬಿಎನ್ಎಸ್-2023ರ ಕಲಂ 352, 115(2), 118(1), 351(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.