ಮಂಗಳೂರು: ಆರಿಫ್ ಕೊಲೆ ಪ್ರಕರಣದ ತನಿಖೆಯನ್ನು ಸಿಸಿಬಿ ಎಸಿಪಿ ಅವರಿಗೆ ಹಸ್ತಾಂತರಿಸಲಾಗಿದೆ. ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಆರು ಮಂದಿ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ನಿರಂತರ ಸಂಚಾರ ಮತ್ತು ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ತನಿಖೆಯ ವೇಳೆ ಇಡೀ ಸಂಚು ಮತ್ತು ಘಟನೆಯ ಸರಣಿಯನ್ನು ಪುನರ್ನಿರ್ಮಿಸುವಾಗ, ಈ ಕೃತ್ಯದಲ್ಲಿ ಹೆಚ್ಚಿನ ವ್ಯಕ್ತಿಗಳ ಪಾತ್ರವಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಗೆ ಕೃತ್ಯ ಎಸಗಲು ಅಥವಾ ತಪ್ಪಿಸಿಕೊಳ್ಳಲು ಹಾಗೂ ಅಡಗಿಕೊಳ್ಳಲು ಸಹಾಯ ಮಾಡಿದ ಶಂಕಿತರನ್ನು ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಇವರ ಪಾತ್ರ ದೃಢಪಟ್ಟರೆ, ಅವರನ್ನು ಕೂಡಲೇ ಬಂಧಿಸಲಾಗುವುದು ಎಂದು ತನಿಖಾ ತಂಡ ಸ್ಪಷ್ಟಪಡಿಸಿದೆ. ಯಾರಾದರೂ ಆರೋಪಿಗಳಿಗೆ ಯಾವುದೇ ರೀತಿಯಲ್ಲಿ ಸಹಕರಿಸಿದರೆ, ಅವರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 249(ಎ) ರ ಅಡಿಯಲ್ಲಿ ಅಂದರೆ ಆಪಾದಿತರಿಗೆ ಆಶ್ರಯ ನೀಡುವುದು ಅಥವಾ ಸಹಕರಿಸುವ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಎಚ್ಚರಿಸಲಾಗಿದೆ.
ಈ ಹಿಂದಿನಂತೆಯೇ, ಈ ಪ್ರಕರಣದಲ್ಲೂ ಈ ಕಾನೂನುಬದ್ಧ ಕ್ರಮವನ್ನು ಯಾವುದೇ ಮುಲಾಜಿಲ್ಲದೆ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.