ಮಂಗಳೂರು ನಗರದ ಕಂಕನಾಡಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಹರಡುವ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ನಿವಾಸಿ ಗಣೇಶ್ ಪ್ರಸಾದ್ (41) ಎಂಬಾತನನ್ನು ಬಂಧಿಸಿದ್ದಾರೆ.
2026ರ ಜನವರಿ ತಿಂಗಳಿನಲ್ಲಿ ಮಂಗಳೂರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದಿದ್ದ ಕುರಾನ್ ಪಠಣ (ಕಿರಾತ್) ಸ್ಪರ್ಧೆಯ ವಿಡಿಯೋವೊಂದು ಉದಯವಾಣಿ ಫೇಸ್ಬುಕ್ ಪುಟದಲ್ಲಿ ಪ್ರಸಾರವಾಗುತ್ತಿತ್ತು. ಈ ವಿಡಿಯೋದ ಅಡಿಯಲ್ಲಿ ಆರೋಪಿ ಗಣೇಶ್ ಪ್ರಸಾದ್ ತನ್ನ ಖಾತೆಯಿಂದ, ಮಕ್ಕಳ ತಲೆಯನ್ನು ಬ್ರೈನ್ ವಾಶ್ ಮಾಡಿ ದೇಶಕ್ಕೆ ಬಾಂಬ್ ಇಡಲು ಕಳಿಸಲಾಗುತ್ತದೆ ಎಂಬ ಅರ್ಥದ ಅತ್ಯಂತ ಪ್ರಚೋದನಕಾರಿ ಕಮೆಂಟ್ ಹಾಕಿದ್ದನು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ ಕಾಯ್ದೆಯ ಕಲಂ 196 ಹಾಗೂ ಐಟಿ ಕಾಯ್ದೆ 66ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಕಮೆಂಟ್ ಹಾಕಿದ ವ್ಯಕ್ತಿ ಮಂಜೇಶ್ವರದ ಎಸ್.ಎನ್. ಕಬನುರಾಯ ಅವರ ಪುತ್ರ ಗಣೇಶ್ ಪ್ರಸಾದ್ ಎಂಬುದನ್ನು ದೃಢಪಡಿಸಿಕೊಂಡಿದ್ದರು. ಮಾರ್ಚ್ 27, 2026ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಲುವಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವಂತಹ ಪೋಸ್ಟ್ ಅಥವಾ ಕಮೆಂಟ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಈ ಮೂಲಕ ಎಚ್ಚರಿಕೆ ನೀಡಿವೆ.