ಮೈಸೂರು : ದನದ ಕೊಟ್ಟಿಗೆಯಲ್ಲಿ ಅಪ್ಪ ಮಗ ಸೇರಿ ಖೋಟಾ ನೋಟ್ ಪ್ರಿಂಟ್ ಮಾಡುತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಇದೀಗ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಮಾದಾಪುರ ಬಳಿ ದನದ ಕೊಟ್ಟಿಗೆಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಟಿ. ನರಸೀಪುರ ಪೊಲೀಸರು ದಾಳಿ ಮಾಡಿ ಕೃತ್ಯದಲ್ಲಿ ತೊಡಗಿದ್ದ ತಂದೆ ಮತ್ತು ಮಗನನ್ನು ಬಂಧಿಸಿರುವ ಘಟನೆ ಟಿ. ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ಬಂಧಿತ ಅಪ್ಪ ಮಗನನ್ನು ಹಿರಿಯೂರು ಗ್ರಾಮದ ನಾಗೇಶ್ (25) ಹಾಗೂ ಶಿವಪ್ರಸಾದ್ (48) ಎಂದು ತಿಳಿದುಬಂದಿದೆ.
ಈ ವೇಳೆ ಪೊಲೀಸರು ಕೋಟ ನೋಟ್ ಪ್ರಿಂಟ್ ಮಾಡಲು ಬಳಸುತ್ತಿದ್ದ ಎಲ್ಲಾ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅರೋಪಿಗಳು ತಾವು ಮಲಗಲು ಹಾಸಿಕೊಂಡಿದ್ದ ಹಾಸಿಗೆ ಪಕ್ಕದಲ್ಲಿ ರಟ್ಟಿನ ಬಾಕ್ಸ್ನಲ್ಲಿ ಎಪ್ಸನ್ ಕಲರ್ ಪ್ರಿಂಟರ್ ಕಂಡುಬಂದಿದೆ. ಪೊಲೀಸರು ಇನ್ನಷ್ಟು ಪರಿಶೀಲನೆ ನಡೆಸಿದಾಗ ಈ ಕೃತ್ಯಕ್ಕೆ ಬಳಸುತ್ತಿದ್ದ ಎಲ್ಲ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಒಂದು ಕಪ್ಪು ಬಣ್ಣದ ಎಪ್ಸನ್ ಪ್ರಿಂಟರ್, ಕಪ್ಪು ಬಣ್ಣದ ಪೇಪರ್ ಮೇಜರ್ಮೆಂಟ್ ಕಟಿಂಗ್ ಸ್ಕೆಲ್, ಒಂದು ಎ4 ಅಳತೆಯ ಗಾಂಧೀಜಿ ಭಾವಚಿತ್ರದ, ವಾಟರ್ ಮಾರ್ಕ್ ಮತ್ತು ನೋಟಿನ ಗೆರೆಯುಳ್ಳ ಬಿಳಿ ಬಣ್ಣದ ಹಾಳೆ, 4 ಕಲರ್ ಇಂಕ್ ಬಾಟಲ್ಗಳು, ಎ4 ಸೈಜ್ ಅಳತೆಯ ಬಿಳಿ ಹಾಳೆಗಳು ಖೋಟಾ ನೋಟು, 2 ಮೊಬೈಲ್ ಮತ್ತು ಅಡಾಪ್ಟರ್, ಕಪ್ಪು ಬಣ್ಣದ 16 ಜಿಬಿ ಪೆನ್ಡ್ರೈವ್, ಎಟಿಎಂ ಕಾರ್ಡ್ ಸೇರಿದಂತೆ ಪ್ರಿಂಟಿಂಗ್ಗೆ ಬಳಸುತ್ತಿದ್ದ ಎಲ್ಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಈ ಸಂಬಂಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.