ಕಾರ್ಕಳ: ಹಾಡಹಗಲೇ ಜ್ಯುವೆಲರಿ ಶಾಪ್ಗೆ ಗ್ರಾಹಕನ ಸೋಗಿನಲ್ಲಿ ನುಗ್ಗಿದ ಕಳ್ಳನೊರ್ವ ಲಕ್ಷಾಂತರ ಮೌಲ್ಯದ ಒಡವೆಗಳನ್ನು ಕದ್ದು ಪರಾರಿಯಾದ ಘಟನೆ ಕಾರ್ಕಳದ ರಥಬೀದಿಯಲ್ಲಿ ನಡೆದಿದೆ.
ರಥಬೀದಿ ರಸ್ತೆಯಲ್ಲಿ ಪ್ರಕಾಶ್ ವಸಂತ್ ಜಾದವ್ ಮಾಲಕತ್ವದ ಪ್ರಣವ್ ಜ್ಯುವೆಲರಿ ಶಾಪ್ ನಲ್ಲಿ ಘಟನೆ ನಡೆದಿದೆ. ಪ್ರಕಾಶ್ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅವರ ಪತ್ನಿ ಜ್ಯುವೆಲರಿ ಶಾಪ್ ನೋಡಿಕೊಳ್ಳುತ್ತಿದ್ದರು.
ಮಧ್ಯಾಹ್ನ 1.30ರ ಸುಮಾರಿಗೆ ಗ್ರಾಹಕನ ರೀತಿ ಶಾಪ್ ಒಳ ಪ್ರವೇಶಿಸಿದ ಯುವಕ ಚಿನ್ನಾಭರಣ ಖರೀದಿ ಬಗ್ಗೆ ಕನ್ನಡದಲ್ಲಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮಾಲಕರು ಹೊರ ಹೋಗಿದ್ದು, ಅವರು ಆಗಮಿಸಿದ ಅನಂತರ ಚಿನ್ನಾಭರಣ ತೋರಿಸುವುದಾಗಿ ಹೇಳಿದ್ದಾರೆ. ಗ್ಯಾಲರಿಯಲ್ಲಿ ಒಂದು ಕಟ್ಟಿನಲ್ಲಿ ಇರಿಸಿದ 26 ಗ್ರಾಂ. ಮೌಲ್ಯದ ಚಿನ್ನದ ಉಂಗುರ, ಜುಮ್ಮಿ ಆಭರಣವನ್ನು ಎತ್ತಿಕೊಂಡಿದ್ದಾನೆ. ಇದನ್ನು ಮುಟ್ಟಬೇಡಿ ಎಂದು ವಾಪಸ್ ತೆಗೆದುಕೊಳ್ಳುವಷ್ಟರಲ್ಲಿ ಕಳ್ಳ ಈ ಬಂಗಾರಗಳನ್ನು ಕದ್ದು ಪರಾರಿಯಾಗಿದ್ದಾನೆ.
ಸಿಸಿಟಿವಿಯಲ್ಲಿ ಕೃತ್ಯ ದಾಖಲಾಗಿದ್ದು, ಆರೋಪಿ ಸ್ಕೂಟರ್ನಲ್ಲಿ ಆಗಮಿಸಿ ಕೃತ್ಯ ಎಸಗಿದ್ದು, ಕಾರ್ಕಳ ನಗರ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.