ಶಿವಮೊಗ್ಗ : ನಗರದ ರಾವ್ ಸ್ಪೋರ್ಟ್ಸ್ ಅರೆನಾದಲ್ಲಿ ಇಂದು ಹಾಗೂ ನಾಳೆ ಭಾರತೀಯ ಜೀವ ವಿಮಾ ನಿಗಮ, ದಕ್ಷಿಣ ಮಧ್ಯ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಕ್ರೀಡಾ ಕೂಟವು ನಡೆಯುತ್ತಿದ್ದು, ಈ ಕ್ರೀಡಾಕೂಟವನ್ನು ದಕ್ಷಿಣ ಮಧ್ಯ ವಲಯಾಧಿಕಾರಿ ಶ್ರೀ ಪುನಿತ್ ಕುಮಾರ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಯಾರೇ ಆಗಲಿ ತಮ್ಮ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅಂತವರ ಆರೋಗ್ಯ ಉತ್ತಮವಾಗಿದ್ದು ಅವರು ಹೆಚ್ಚಿನ ಸಾಧನೆ ಮಾಡಬಹುದು. ಹಾಗೆಯೇ ಪ್ರತಿಯೊಬ್ಬ ಕ್ರೀಡಾಪಟುವು ತಾನು ಗೆಲ್ಲಬೇಕು ಎಂದು ಆಡುತ್ತಾನೆ, ಗೆಲ್ಲಲು ಬೇಕಾದ ನೈಪುಣ್ಯತೆ ಮತ್ತು ಶಿಸ್ತಿನ ಕಡೆ ಗಮನ ಹರಿಸುತ್ತಾನೆ, ಅದು ಅವನ ವೈಯಕ್ತಿಕ ಹಾಗೂ ವೃತ್ತಿ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಹದಿನೇಳು ವಿಭಾಗಗಳನ್ನು ಒಳಗೊಂಡ ದಕ್ಷಿಣ ಮಧ್ಯ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಕ್ರೀಡಾಕೂಟವನ್ನು ಐದನೇ ಬಾರಿಗೆ ಶಿವಮೊಗ್ಗ ನಗರದಲ್ಲಿ ಆಯೋಜಿಸುತ್ತಿರುವುದು ಬಹಳ ಸಂತೋಷದ ಸಂಗತಿ. ಇದರಲ್ಲಿ ಎಪ್ಪತ್ತಕ್ಕೂ ಹೆಚ್ಚು ಕ್ರೀಡಾಪಟುಗಳು ದೂರದೂರದ ಊರುಗಳಿಂದ ಬಂದು ಭಾಗವಹಿಸುತ್ತಿದ್ದಾರೆ. ಅವರಿಗೆಲ್ಲಾ ನಮ್ಮ ಕರ್ನಾಟಕದ ಜೊತೆಗೆ ಶಿವಮೊಗ್ಗದ ಕುರಿತು ತಿಳಿದುಕೊಳ್ಳಲು ಒಂದು ಅವಕಾಶವೂ ಆಗುತ್ತದೆ ಮುಂತಾಗಿ ಮಾತನಾಡಿದರು.
ಶ್ರೀ ರಾಮದಾಸರು ಸ್ವಾಗತಿಸಿದರೆ, ಶ್ರೀಮತಿ ಕರುಣಾರವರು ವಂದನಾರ್ಪಣೆ ಸಲ್ಲಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕರಾದ ಶ್ರೀ ಸುಜಿತ್ ಕುಮಾರ್, ವಿಕ್ರಯ ವ್ಯವಸ್ಥಾಪಕರಾದ ಶ್ರೀ ಯೋಗೆಂದ್ರ, ವೆಂಕಟೇಶ್ ಕುಮಾರ್, ಬಿ.ಜಿ. ಹರೀಶ್, ರವಿ, ಆನಂದ್, ವಿಭಾಗೀಯ ಕಚೇರಿಯ ಸಿಬ್ಬಂದಿಮುಂತಾದವರು ಉಪಸ್ಥಿತರಿದ್ದು ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.