ಸಿಂಗಪುರ: ಭಾರತದ ಸಾತ್ವಿಕ್ಸಾಯಿರಾಜ್ -ಚಿರಾಗ್ ಶೆಟ್ಟಿ ಅವರು ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗುರುವಾರ ಎಂಟರ ಘಟ್ಟ ತಲುಪಿದರು. ಆದರೆ ಸಿಂಗಲ್ಸ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಅವರ ಸವಾಲು ಬೇಗ ಅಂತ್ಯಗೊಂಡಿತು. ಸಾತ್ವಿಕ್- ಚಿರಾಗ್ ಜೋಡಿ ಹಿನ್ನಡೆಯಿಂದ ಚೇತರಿಸಿಕೊಂಡು, ಏಳನೇ ಶ್ರೇಯಾಂಕದ ಸಬರ್ ಕಾರ್ಯಮನ್ ಗುತಮ- ಮೊಹಮ್ಮದ್ ರೇಜಾ ಪೆಹವಿ ಇಸ್ನಹಾನಿ ಜೋಡಿಯನ್ನು (ಇಂಡೊನೇಷ್ಯಾ) 19-21, 21-16, 21-19 ರಿಂದ ಸೋಲಿಸಿತು. ಈ ತೀವ್ರ ಹೋರಾಟದ ಪಂದ್ಯ ಒಂದೂಕಾಲು ಗಂಟೆ ನಡೆಯಿತು.
ಭಾರತದ ಜೋಡಿ ಎಂಟರ ಘಟ್ಟದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಗೋಹ್ ತೈ ಫೀ- ನೂರ್ ಇಝದ್ದೀನ್ ಜೋಡಿಯನ್ನು (ಮಲೇಷ್ಯಾ) ಎದುರಿಸಲಿದೆ. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ವೇಳೆ ಚಿರಾಗ್ ಗಾಯಾಳಾದ ನಂತರ ಭಾರತದ ಜೋಡಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದೆ.