ಮುಂಬೈ : ಐಪಿಎಲ್ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿದೆ. ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ದ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್ಗಳಿಂದ ಮಣಿಸಿದೆ.
ಈ ಪಂದ್ಯದಲ್ಲಿ ಆರ್ಸಿಬಿ ನೀಡಿದ್ದ ಬೃಹತ್ ಗುರಿಯೊಂದಿಗೆ ಮೈದಾನಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭ ಪಡೆದಿತ್ತು. ಕೇವಲ 1.3 ಓವರ್ಗಳಲ್ಲೆ 21 ರನ್ ಬಾರಿಸಿತು. ರೋಹಿತ್ ಶರ್ಮಾ 9 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 17 ರನ್ ಬಾರಿಸಿದ್ದರು. ಆದರೆ ಯಶ್ ದಯಾಲ್ ಎಸೆತದಲ್ಲಿ ಪೆವಿಲಿಯ್ ಸೇರಿದರು.
ನಂತರ ವಿಲ್ ಜಾಕ್ಸ್ (22) ಮತ್ತು ಸೂರ್ಯಕುಮಾರ್ ಯಾದವ್ (28) ರನ್ ಗಳಿಸಲು ಕಷ್ಟಪಟ್ಟರು. ಇದರಿಂದಾಗಿ ಮುಂಬೈ ರನ್ ವೇಗಕ್ಕೆ ಬ್ರೇಕ್ ಬಿದಿತ್ತು. ಈ ಇಬ್ಬರ ನಿರ್ಗಮನದ ಬಳಿಕ ಅಬ್ಬರಿಸಿದ ತಿಲಕ್ ವರ್ಮಾ (56) ಮತ್ತು ಹಾರ್ದಿಕ್ ಪಾಂಡ್ಯ (42) ಪಂದ್ಯಕ್ಕೆ ತಿರುವು ನೀಡಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂದ್ಯ ಕೊನೆಯ ಓವರ್ ವರೆಗೆ ಸಾಗಿತು.
ಕೊನೆಯ ಎರಡು ಓವರ್ಗಳಲ್ಲಿ 28 ರನ್ಗಳು ಬೇಕಾಗಿದ್ದಾಗ, ಹ್ಯಾಜಲ್ವುಡ್ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಿದರು. ಆದರೆ ಅಂತಿಮ ಓವರ್ನಲ್ಲಿ ಕೃನಾಲ್ ಪಾಂಡ್ಯ ಅದ್ಭುತ ಬೌಲಿಂಗ್ ಮಾಡಿ ಕೇವಲ ಆರು ರನ್ ನೀಡಿ 3 ವಿಕೆಟ್ ಪಡೆದರು. ಇದರೊಂದಿಗೆ ಆರ್ಸಿಬಿ ಐಪಿಎಲ್ನಲ್ಲಿ ತನ್ನ ಮೂರನೇ ಗೆಲುವನ್ನು ದಾಖಲಿಸಿತು.
ಇದಕ್ಕೂ ಮನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ವಿರಾಟ್ ಕೊಹ್ಲಿ (67), ನಾಯಕ ರಜತ್ ಪಾಟಿದಾರ್ (64) ಅರ್ಧಶತಕ ಮತ್ತು ಜಿತೇಶ್ ಶರ್ಮಾ (40) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 221 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ 2, ಹಾರ್ದಿಕ್ ಪಾಂಡ್ಯ 2 ವಿಕೆಟ್ ಮತ್ತು ವಿಘ್ನೇಶ್ ಪುತೂರ್ ಒಂದು ವಿಕೆಟ್ ಪಡೆದರು.
ವಾಂಖೆಡೆ ಮೈದಾನದಲ್ಲಿ ಆರ್ಸಿಬಿ ತಂಡ 10 ವರ್ಷದ ಬಳಿಕ ಮುಂಬೈ ತಂಡವನ್ನು ಮಣಿಸಿ ಗೆಲುವು ಸಾಧಿಸಿತು. ಈ ಹಿಂದೆ 2015ರಲ್ಲಿ ಕೊನೆಯ ಬಾರಿಗೆ ಈ ಮೈದಾನದಲ್ಲಿ ಗೆಲುವು ಸಾಧಿಸಿತ್ತು.