ದುಬೈ : ಚಾಂಪಿಯನ್ಸ್ ಟ್ರೋಫಿ ಭಾಗವಾಗಿ ಭಾನುವಾರ (ಮಾರ್ಚ್ 2) ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಎ ಗುಂಪಿನ ಅಂತಿಮ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ನೀಡಿದ್ದ 249 ರನ್ಗಳ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ಸ್ಪಿನ್ ದಾಳಿಗೆ ಸಿಲುಕಿ 205 ರನ್ಗಳಿಗೆ ಸರ್ವಪತನ ಕಂಡಿದೆ. ತಂಡದ ಪರ ಕೇನ್ ವಿಲಿಯಮ್ಸನ್ ಮಾತ್ರ ಉತ್ತಮ ಪ್ರದರ್ಶನ ನೀಡಿದರು.
ಅರ್ಧಶತಕದೊಂದಿಗೆ 81 ರನ್ ಬಾರಿಸಿದರೂ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಉಳಿದಂತೆ ವಿಲ್ ಯಂಗ್ (22), ಸ್ಯಾಂಟ್ನರ್ (28), ಬಿಟ್ಟರೆ ಉಳಿದ ಬ್ಯಾಟರ್ಗಳು 20 ರನ್ಗಳ ಒಳಗೆ ಔಟಾದರು. ಇದರಿಂದಾಗಿ ಕಿವೀಸ್ ಪಡೆ ಕೊನೆವರೆಗೂ ಹೋರಾಡಿ 44 ರನ್ಗಳಿಂದ ಸೋಲೊಪ್ಪಿಕೊಂಡಿತು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಬಂದಿದ್ದ ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿತು. ಆರಂಭದಲ್ಲೇ 3 ವಿಕೆಟ್ ಉರುಳಿದವು. ರೋಹಿತ್ 15 ರನ್ ಗಳಿಸಿ ಔಟಾದರೆ, ಶುಭ್ಮನ್ ಗಿಲ್ 2 ರನ್ಗೆ ಪೆವಿಲಿಯನ್ ಸೇರಿದರು. ಬಳಿಕ ಬಂದ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಇದರಿಂದಾಗಿ ಭಾರತ 27 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ತಂಡಕ್ಕೆ ಶ್ರೇಯಸ್ ಅಯ್ಯರ್ (79), ಅಕ್ಷರ್ ಪಟೇಲ್ (42), ಹಾರ್ದಿಕ್ ಪಾಂಡ್ಯ (45) ಆಸರೆಯಾದರು. ಈ ಮೂವರ ಬ್ಯಾಟಿಂಗ್ ನೆರವಿನಿಂದ ಭಾರತ 200ರ ಗಡಿ ದಾಟುವಲ್ಲಿ ಯಶಸ್ವಿ ಆಯ್ತು.
ವರುಣ್ ಚಕ್ರವರ್ತಿ ಕಮಾಲ್ : ಭಾರತದ ಪರ ವರುಣ್ ಚಕ್ರವರ್ತಿ ಭರ್ಜರಿ ಪ್ರದರ್ಶನ ನೀಡಿದರು. ತಮ್ಮ ಸ್ಪಿನ್ ಬೌಲಿಂಗ್ ಮೂಲಕ 5 ವಿಕೆಟ್ ಉರುಳಿಸಿದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜೊತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಚಾಂಪಿಯನ್ಸ್ ಟ್ರೋಫಿಯಲ್ಲಿ 5 ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡರು. ಇದಕ್ಕೂ ಮೊದಲು ಈ ಸಾಧನೆಯನ್ನು ರವೀಂದ್ರ ಜಡೇಜಾ ಮಾಡಿದ್ದಾರೆ.