image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚಾಂಪಿಯನ್ಸ್ ಟ್ರೋಫಿ : ಬಾಂಗ್ಲಾ ಮಣಿಸಿ ಭಾರತ ಶುಭಾರಂಭ

ಚಾಂಪಿಯನ್ಸ್ ಟ್ರೋಫಿ : ಬಾಂಗ್ಲಾ ಮಣಿಸಿ ಭಾರತ ಶುಭಾರಂಭ

ದುಬೈ : ಚಾಂಪಿಯನ್ಸ್​ ಟ್ರೋಫಿ ಭಾಗವಾಗಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್​ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ನೀಡಿದ್ದ 228 ರನ್​ಗಳ ಸಾಮಾನ್ಯ ಗುರಿ ಬೆನ್ನತ್ತಿದ ಭಾರತ 21 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗಾರಿ ಬಾರಿಸಿತು.

ಚೇಸಿಂಗ್​ ವೇಳೆ ಉತ್ತಮ ಆರಂಭ ಪಡೆದಿದ್ದ ಭಾರತ ರೋಹಿತ್​ ಶರ್ಮಾ (41) ನಿರ್ಗಮನದ ಬಳಿಕ ವಿರಾಟ್​ ಕೊಹ್ಲಿ (22), ಶ್ರೇಯಸ್​ ಅಯ್ಯರ್​ (15), ಅಕ್ಷರ್​ ಪಟೇಲ್​ (8) ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಶುಭಮನ್​ ಗಿಲ್​, ರಾಹುಲ್​ ಜೊತೆಗೂಡಿ ಸಮಯೋಚಿತ ಬ್ಯಾಟಿಂಗ್​ ಮೂಲಕ ಶತಕ ಸಿಡಿಸಿದರು. ಇದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಗಿಲ್​ 129 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 2 ಸಿಕ್ಸರ್​ ಸಹಾಯದಿಂದ ಅಜೇಯ 101 ರನ್​ ಕಲೆಹಾಕಿದರು.

ಅಕ್ಷರ್​ ಪಟೇಲ್​ ನಿರ್ಗಮಿಸುತ್ತಿದ್ದಂತೆ ಬ್ಯಾಟಿಂಗ್​ಗೆ ಆಗಮಿಸಿದ ರಾಹುಲ್, ಗಿಲ್​ ಜೊತೆ ಸೇರಿ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಜೊತೆಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 47 ಎಸೆತಗಳನ್ನೆದುರಿಸಿದ ರಾಹುಲ್​ 41 ರನ್​ ಬಾರಿಸಿದರು. ಇದರಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್​ ಸೇರಿವೆ. ಅಲ್ಲದೇ ಪಂದ್ಯದ ಗೆಲುವಿಗೆ 2 ರನ್​ ಬೇಕಿದ್ದಾಗ ಸಿಕ್ಸರ್​ ಸಿಡಿಸಿದರು.

 ಇದಕ್ಕೂ ಮುನ್ನ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ್ದ ಬಾಂಗ್ಲಾ ಆರಂಭಿಕ ಆಘಾತ ಎದುರಿಸಿತು. ಕೇವಲ 35 ರನ್​ಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡಿತು. ಆರಂಭಿಕ ಬ್ಯಾಟರ್​ ಹಸನ್​ (25), ಮೆಹದಿ ಹಸನ್ (5)​ ಅಲ್ಪಮೊತ್ತಕ್ಕೆ ನಿರ್ಗಮಿಸಿದರೆ, ನಾಯಕ ನಜ್ಮುಲ್​ ಶಾಂಟೋ, ಸೌಮ್ಯ ಸರ್ಕಾರ್​, ಮುಶ್ಫಿಖರ್​ ರಹೀಮ್​ ಖಾತೆ ತೆರೆಯದೆ ಪೆವಿಲಿಯನ್​ ಸೇರಿದರು.

ಆದರೆ ತೋಹಿದ್​ ಹೃದೊಯಿ ಮತ್ತು ಜಾಕರ್​ ಅಲಿ ಜೊತೆಗೂಡಿ ತಂಡದ ಸ್ಕೋರ್​ 200ರ ಗಡಿ ದಾಟುವಲ್ಲಿ ನೆರವಾದರು. ಈ ಇಬ್ಬರೂ 150 ಎಸೆತಗಳಲ್ಲಿ 154 ರನ್​ ಸಿಡಿಸಿದರು. ಹೃದೊಯಿ 118 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್​ ಸಹಾಯದಿಂದ ಶತಕ ಸಿಡಿಸಿದರೆ, ಜಾಕೆರ್​ ಅಲಿ 114 ಎಸೆತಗಳಲ್ಲಿ 68 ರನ್ ಪೇರಿಸಿದರು.

ಚಾಂಪಿಯನ್ಸ್​ ಟ್ರೋಫಿಯ ಭಾರತದ ಮೊದಲ ಪಂದ್ಯದಲ್ಲೇ ಮೊಹಮ್ಮದ್ ಶಮಿ ಮಿಂಚಿನ ಬೌಲಿಂಗ್​ ಮಾಡಿ 5 ವಿಕೆಟ್​ ಉರುಳಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 200 ವಿಕೆಟ್​ ಪಡೆದ ಬೌಲರ್​ ಎಂಬ ವಿಶ್ವದಾಖಲೆ ಬರೆದಿದ್ದಾರೆ.

Category
ಕರಾವಳಿ ತರಂಗಿಣಿ