ದಕ್ಷಿಣ ಕನ್ನಡದ ಸುಳ್ಯದಿಂದ ಮಡಿಕೇರಿ ಮಾರ್ಗದಲ್ಲಿ "ಅರಂತೋಡು"ಎಂಬಲ್ಲಿ ಬಲಕ್ಕೆ ತಿರುಗಿ ಆರೇಳು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಹಸಿರು ಪ್ರಕೃತಿಯ ಸುಂದರ ತಾಣವೇ ತೊಡಿಕಾನ. ಜುಳು ಜುಳು ಸದ್ದು ಮಾಡುತ್ತಾ ಹರಿಯುವ ಪಯಸ್ವಿನಿ ನದಿಯ ತಟದಲ್ಲಿ ಕಂಗೊಳಿಸುತ್ತದೆ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಾಲಯ. ಇದು 3000 ವರ್ಷಗಳಷ್ಟು ಹಳೆಯ ದೇವಸ್ಥಾನವೆಂದು ಹೇಳಲಾಗುತ್ತದೆ. ಕೆಲವು ಇತಿಹಾಸಕಾರರ ಪ್ರಕಾರ ಮಹಾಭಾರತ ಕಾಲದಲ್ಲಿಯೂ ಇತ್ತು ಎನ್ನಲಾಗುತ್ತದೆ. ದೇವಸ್ಥಾನ ಇದ್ದ ಜಾಗ ಮೊದಲು ಮಹಾತಪಸ್ವಿಗಳಾದ ಕಣ್ವಮುನಿಗಳ ಆಶ್ರಮವಾಗಿದ್ದು, ದ್ವಾಪರಯುಗದಲ್ಲಿ ಮಧ್ಯಮ ಪಾಂಡವನಾದ ಅರ್ಜನನು ಪಾಶುಪತಾಸ್ತ್ರಕ್ಕಾಗಿ ತಪಸ್ಸಾಚರಿಸಿದ ಜಾಗ ಇಲ್ಲಿಂದ 2 ಕಿ.ಮೀ ದೂರವಿರುವ" ದೇವರಗುಂಡಿ" ಜಲಪಾತವೆಂದು ಇತಿಹಾಸ ತಿಳಿಸುತ್ತದೆ. ಕಿರಾತಾರ್ಜುನ ಯುದ್ಧ ನಡೆದು ಅರ್ಜುನನಿಗೆ ಶಿವ ಪಾರ್ವತಿಯರು ಪ್ರತ್ಯಕ್ಷರಾದ ನಂತರ ಲಿಂಗ ರೂಪದಲ್ಲಿ ಐಕ್ಯರಾಗುತ್ತಾರೆ. ಯುದ್ಧದ ಸಮಯದಲ್ಲಿ ಅರ್ಜುನನ ಗಾಂಡೀವದಿAದ ಶಿವನ ಹಣೆಗೆ ತಾಗಿದ ಪೆಟ್ಟು ಈಗ ಲಿಂಗದಲ್ಲಿ ಕಾಣುವುದಂತೆ. ನಂತರದ ಕಾಲದಲ್ಲಿ ಆ ಲಿಂಗ ಭೂಮಿಯೊಳಗೆ ಸೇರಿ, ಮತ್ತೆ ಹಲವು ವರ್ಷಗಳ ನಂತರ " ಮಲ್ಲಿ" ಎಂಬ ಗಿರಿಜನ ಹೆಣ್ಣು ಹುಲ್ಲು ಕಡಿಯುವ ಸಮಯದಲ್ಲಿ ಲಿಂಗಕ್ಕೆ ಕತ್ತಿ ತಾಗಿ ರಕ್ತ ಸೂಸಿದಾಗ ಗಾಬರಿಯಾಗುತ್ತಾಳೆ. ಸ್ವಲ್ಪ ದೂರದಲ್ಲಿ ಆಶ್ರಮದಲ್ಲಿದ್ದ ಕಣ್ವರಿಗೆ ತಿಳಿದು ಅವರು ಬಂದು ಸ್ಪರ್ಶಿಸಿದಾಗ ತ್ರಿಕಾಲಜ್ಞಾನಿಗಳಾದ ಅವರಿಗೆ ಲಿಂಗದ ಹಿನ್ನೆಲೆ ತಿಳಿಯುತ್ತದೆ. ರಕ್ತಬಂದ ಜಾಗಕ್ಕೆ ಗಂಧ ತೆಯಿದು ಹಚ್ಚಿದಾಗ ರಕ್ತ ನಿಲ್ಲುತ್ತದೆ., ಆ ಗಾಯದ ಕುರುಹು ಈಗಲೂ ಇರುವುದರಿಂದ ಲಿಂಗಕ್ಕೆ ಪ್ರತೀದಿನ ಒಂದು ಉಂಡೆ ಶ್ರೀಗಂಧ ತೆಯಿದು ಇಡುವ ಸಂಪ್ರದಾಯವಿದೆ. ನಂತರ ಪರಮೇಶ್ವರನನ್ನು ಧ್ಯಾನಿಸಿ ಪ್ರತ್ಯಕ್ಷೀಕರಿಸಿದ ಕಣ್ವರು ಆ ಲಿಂಗವನ್ನು ತನ್ನ ಆಶ್ರಮದ ಜಾಗದಲ್ಲಿ ಪ್ರತಿಷ್ಠೆ ಮಾಡುವ ಇಂಗಿತ ವ್ಯಕ್ತಪಡಿಸುತ್ತಾರೆ. ಆಗ ಭಗವಂತನು ಪಂಥವೊAದನ್ನು ಇಡುತ್ತಾನೆ."ನಿಮ್ಮ ಸಂಕಲ್ಪದ ಜಾಗಕ್ಕೆ ಮೊದಲು ನೀವು ತಲುಪಿದರೆ ನೀವು ಗೆಲ್ಲುತ್ತೀರಿ ಆಗ ನಿಮ್ಮ ಸಂಕಲ್ಪ ಈಡೇರಿಸುತ್ತೇನೆ. ನಾನು ಮೊದಲು ತಲುಪಿದರೆ ನೀವು ಸೋಲುತ್ತೀರಿ ಆಗ ನಿಮ್ಮ ಸಂಕಲ್ಪ ಸಾಧ್ಯವಿಲ್ಲ ಎನ್ನುತ್ತಾರೆ. ಹಾಗೆ ಕಣ್ವರು ಲಿಂಗವನ್ನೆತ್ತಿಕೊAಡು ಭೂ ಮಾರ್ಗದಲ್ಲಿ ನಡೆದರೆ ಶ್ರೀ ವಿಷ್ಣುವೇ ಮೀನಾಗಿ ಮತ್ಸ್ಯವಾಹನನಾದ ಶಿವನು ದೇವರಗುಂಡಿಯಲ್ಲಿ ಮುಳುಗಿ ಜಲಮಾರ್ಗವಾಗಿ ಸಾಗುತ್ತಾನೆ, ಆದರೆ ಜಾಗಕ್ಕೆ ಕಣ್ವರೇ ಮೊದಲು ತಲುಪಲು ಭಕ್ತಪ್ರಿಯ ನಾದ ಪರಮೇಶ್ವರನು ಸೋತು ಪ್ರತಿಷ್ಠಾಪಿಸಲು ಸಮ್ಮತಿಸಿದನಂತೆ. ಕಣ್ವ ಮಹರ್ಷಿಗಳು ಲಿಂಗವನ್ನು ಪ್ರತಿಷ್ಠೆ ಮಾಡಿ “ಅರ್ಜುನನಿಂದ ಮಲ್ಲಿಗೆ ದೊರೆತ ಕಾರಣ ಮಲ್ಲಿಕಾರ್ಜುನ " ಎಂಬ ಹೆಸರನ್ನು ನೀಡಿ ಇಲ್ಲಿ ದೇವಾಲಯ ಸ್ಥಾಪಿಸಲ್ಪಟ್ಟಿತು. ಇಂತಹ ರಮಣೀಯವಾದ ಪೃಕೃತಿಯ ಮಡಿಲಲ್ಲಿ ನೆಲೆ ನಿಂತಿರುವ ಮಲ್ಲಿಕಾರ್ಜುನನ ದರುಶನ ಪಡೆದು ಪುನೀತರಾಗಲು ಮರೆಯದಿರಿ.
✍ ಲಲಿತಶ್ರೀ ಪ್ರೀತಂ ರೈ