ದಕ್ಷಿಣದ ಕರಾವಳಿ ಬಾಗವೆಂದರೆ ದೈವಗಳ ನೆಲೆಬೀಡು ಎಂದರೆ ತಪ್ಪಾಗಲಾರದು. ಇಲ್ಲಿ ಸಾವಿರಕ್ಕೂ ಹೆಚ್ಚಿನ ದೈವಗಳು ಆರಾದಿಸಲ್ಪಡುತ್ತವೆ. ಅದರಲ್ಲಿ ಕಲ್ಲುರ್ಟಿ ಕಲ್ಕುಡ ಎನ್ನುವ ಅಣ್ಣ ತಂಗಿ ದೈವಗಳು ಪ್ರಮುಖವಾದವು. ಈ ಅಣ್ಣ ತಂಗಿಯರು ನೆಲೆಯಾಗಿ ಕಾರ್ಣಿಕ ತೋರಿಸುತ್ತಿರಮ ತಾಣಗಳಲ್ಲಿ ಶ್ರೀ ಕ್ಷೇತ್ರ ಪಣೋಲಿಬೈಲು ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಈ ದೈವಸ್ಥಾನದಲ್ಲಿ ತಾಯಿಗೆ ಹರಕೆಯಾಗಿ, ಪಟ್ಟೆ ಸೀರೆ ಹರಕೆ, ಅಗೆಲು ಕೋಲ, ಮಲ್ಲಿಗೆ ಹೂ, ಬೆಳ್ಳಿ ಬಂಗಾರವನ್ನು ಭಕ್ತರು ಅರ್ಪಿಸುತ್ತಾರೆ.
ಇತಿಹಾಸದ ಪ್ರಕಾರ ಸುಮಾರು 400 ವರ್ಷಗಳಿಗೂ ಹಿಂದೆ ಉಪ್ಪಿನಂಗಡಿಯ ಮಂತ್ರವಾದಿ, ವಿದ್ವಾಂಸನಾದ ವೈಲಾಯರ ಮನೆ ದೇವರಾಗಿ ಬೆಳಗಿದ ಈ ಎರಡು ಶಕ್ತಿಗಳು ಅನಂತರ ಕಲ್ಲೇಗ, ನೇರಳಕಟ್ಟೆ, ಕಡಂಬು, ಪೊಳತ್ತೂರು ಆ ಮೂರು ತದನಂತರ ಪಣೋಲಿಬೈಲಿನಲ್ಲಿ ನೆಲೆಯಾದರು. ಈ ಕ್ಷೇತ್ರದಲ್ಲಿ ನೆಲೆಯಾಗಿ ಹಗಲಿನಲ್ಲಿ ಅಗೆಲು ಭಾರಣೆ ರಾತ್ರಿಯಲ್ಲಿ ನರ್ತನಕೋಲ ಪಡೆದುಕೊಂಡು ಅಭಯ ನೀಡುತ್ತಿದ್ದಾರೆ.
ಪಣೋಲಿಬೈಲ್ ಕಲ್ಲುರ್ಟಿ ಕ್ಷೇತ್ರದಲ್ಲಿ ಬಡವ ಬಲ್ಲಿದನೆಂಬ ಭೇದಭಾವವಿಲ್ಲದೆ ಸರ್ವರ ರಕ್ಷಕಿಯಾಗಿ ಮೆರೆಯುತ್ತಿರುವ, ಇವತ್ತಿನ ದಿನದಲ್ಲಿ ವಾರಕ್ಕೆ ಐದು ದಿವಸ ಇಪ್ಪತ್ತು ಹರಕೆಯ ಕೋಲ ಅದೇ ರೀತಿ ವಾರದ ಮೂರು ದಿನ ನಾಲ್ಕು ಸಾವಿರಕ್ಕೂ ಮಿಕ್ಕಿ ಅಗೆಲು ಸೇವೆ ಹರಕೆಯನ್ನು ಪಡೆಯುತ್ತಿರುವ ಕ್ಷೇತ್ರ. ಮದುವೆ, ವಿದ್ಯೆ, ಕಷ್ಟಕಾರ್ಪಣ್ಯ, ಕಳ್ಳತನ ಉದ್ಯೋಗಕ್ಕೆ ಅಲ್ಲದೆ ಶರೀರದಲ್ಲಿರುವ ಪ್ರೇತಾತ್ಮ ಇನ್ನಿತ್ತರ ದುಷ್ಟಶಕ್ತಿಗಳ ಪರಿಹಾರಕ್ಕೆ ದೈವ ಕೋಲದಲ್ಲಿ ವಿಮೋಚನೆ ಸಿಗುತ್ತದೆ. ಇಂತಹ ದೈವಸ್ಥಾನಕ್ಕೆ ಒಮ್ಮೆ ಬೇಟಿ ನೀಡಲು ಮರೆಯದಿರಿ.
✍ ಲಲಿತಶ್ರೀ ಪ್ರೀತಂ ರೈ