ದಕ್ಷಿಣ ಕರ್ನಾಟಕದಲ್ಲಿ "ಕಾಸೆ" ಕುಣಿತ ಎಂದು ಕರೆಯಲಾಗುವ ಕಲೆಯನ್ನೇ ಉತ್ತರ ಕರ್ನಾಟಕದ ಕಡೆ "ಪುರವಂತಿಕೆ" ಎಂದೂ ಕರೆಯುತ್ತಾರೆ. ಕೆಲವು ಕಡೆ ಹಲಗೆ ಕುಣಿತ, ಲಿಂಗದ ಬೀರನ ಕುಣಿತ, ಕಟಕಿ ಎನ್ನುವ ಪರ್ಯಾಯ ಹೆಸರುಗಳು ಕೂಡ ಇದೆ ಎನ್ನಲಾಗುತ್ತದೆ. ಕಾಸೆ ಕುಣಿತಕ್ಕೂ ವೀರಗಾಸೆಯಲ್ಲಿ ಹೇಳುವ ಕಥೆಯ ಹಿನ್ನಲೆಯೇ ಇದ್ದರೂ ವೇಷಭೂಷಣಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಕಲಾವಿದರು ಕೆಂಪು ಕಾಸೆ ಪಂಚೆ, ಕೆಂಪು ಜುಬ್ಬ, ತಲೆಗೆ ಕೆಂಪು ಚೌಕಗಳನ್ನು ಧರಿಸಿರುತ್ತಾರೆ. ಹಿಂದಲೆಗೆ ಚೌಲಿ, ಬಲಗೈಗೆ ಖಡ್ಗ ಹಾಗೂ ಎಡಗೈಯಲ್ಲಿ ಎದೆಗೆ ಹೊಂದಿಕೊಂಡಂತೆ ಮಹಾರುದ್ರನ ಪ್ರತಿಮೆ ಇರುವ ಹಲಗೆಯನ್ನು ಧರಿಸಿರುತ್ತಾರೆ. ಮುಖಕ್ಕೆ ಕೆಂಪು ಬಣ್ಣ, ನಡುವಿಗೆ ಹಿತ್ತಾಳೆ ಅಥವಾ ಬೆಳ್ಳಿಯ ಗಗ್ಗರ, ಕಾಲಿಗೆ ಗೆಜ್ಜೆ- ಇವರ ತೊಡುಗೆಗಳು. ಶಿವರಾತ್ರಿ, ನವರಾತ್ರಿ ಕಾರ್ತಿಕ ಹಬ್ಬ ಹರಿದಿನಗಳಲ್ಲಿ ಮದುವೆ, ದೇವರ ಉತ್ಸವ, ಗೃಹಪ್ರವೇಶ ಮೊದಲಾದ ಸಂದರ್ಭಗಳಲ್ಲಿ ಈ ಆಚರಣೆ ನಡೆಯುತ್ತದೆ. ತಮಟೆ, ನಗಾರಿ, ತಾರಸಿ, ಪಕ್ಕ ವಾದ್ಯ ಮೊದಲಾದ ವಾದ್ಯ ವಿಶೇಷಗಳು ಇದಕ್ಕೆ ಹಿಮ್ಮೇಳ. ಸಾಮಾನ್ಯವಾಗಿ ಯಾವುದಾದರೂ ಹೊಳೆಯ ಬದಿಯಿಂದ ಕಾಸೆ ಕಟ್ಟುವ ವ್ಯಕ್ತಿಯನ್ನು ಹಿಮ್ಮೇಳದೊಂದಿಗೆ ಕರೆತರುತ್ತಾರೆ. ಹೊಳೆ ಇಲ್ಲದಂತಹ ಸಂದರ್ಭಗಳಲ್ಲಿ ಸಮೀಪದ ಗುಡಿಯಿಂದಲೂ ಕರೆತರಬಹುದು. ಹೀಗೆ ಕರೆದು ತರುವಾಗ ಹೆಣ್ಣುಮಕ್ಕಳು ಗಡಿಗೆಗಳಲ್ಲಿ ನೀರು ತರುತ್ತಾರೆ. ಇದಕ್ಕೆ ದೇವರು ತರುವುದು ಎನ್ನಲಾಗುತ್ತದೆ. ನಡೆದು ತರುವ ದಾರಿಯಲ್ಲಿ ಮೈಲಿಗೆಯಾಗಬಾರದೆಂದು ಅಗಸನಿಂದ ಮಡಿ ಮಾಡಿದ ಬಟ್ಟೆಗಳನ್ನು ಹಾಸುತ್ತಾರೆ. ಇದನ್ನು ನಡೆಮಡಿ ಎನ್ನಲಾಗುತ್ತದೆ. ಈ ಒದ್ದೆ ಬಟ್ಟೆಯನ್ನು “ಹಡದಿ” ಎಂದು ಕರೆಯಲಾಗುತ್ತದೆ. ಹೀಗೆ ಬರುವಾಗ ದೇವಾಲಯದ ಮುಂದೆ ವಾದ್ಯಗಳ ಸಹಿತ ಕಾಸೆ ಕುಣಿತ ನಡೆಯುತ್ತದೆ. ಕುಣಿತ ಮುಗಿದ ಮೇಲೆ ನಡು ನಡುವೆ 'ಕಟಕಿ' ಅಥವಾ 'ಖಡ್ಗ' ಹೇಳುತ್ತಾರೆ. ಸಾಮಾನ್ಯವಾಗಿ, ಈ ಕಟಕಿಗಳು ದಕ್ಷಬ್ರಹ್ಮನ ಸಂಹಾರ, ಸೃಷ್ಠಿ ಲಯಗಳಿಗೆ ಸಂಬಂಧಿಸಿದ ಕಥೆಗಳು, ಹಾಗೂ ಪುಣ್ಯಕಥೆಗಳಾಗಿರುತ್ತದೆ. ಹೀಗೆ ಕಟಕಿ ಹೇಳುತ್ತಿರಬೇಕಾದರೆ ನಡುನಡುವೆ ಅವರಲ್ಲೇ ಒಬ್ಬ 'ಉಳ್ಳತ್' ಎನ್ನುತ್ತಿರುತ್ತಾನೆ. ಕಾಸೆ ಕುಣಿತದವರು ವೀರಾವೇಷದಿಂದ ಕುಣಿಯುತ್ತಿರುವಾಗ ಅವರ ಕೋಪವನ್ನು ಉಪಶಮನ ಮಾಡಲು ಆಗಾಗ ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ. ಇದನ್ನು 'ಈಡುಗಾಯಿ' ಎಂದು ಕರೆಯುತ್ತಾರೆ. ಪುರವಂತಿಕೆ ಮೇಳ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ಆಚರಣೆ ಮತ್ತು ಕಲೆ. ಈ ಕಲಾವಿದರಿಗೆ ಪುರವಂತರೆಂದೇ ಕರೆಯುತ್ತಾರೆ. ಅಂದರೆ ಪುರಗಳನ್ನು ರಕ್ಷಿಸುವವರೆಂಬ ದನಿ ಇಲ್ಲಿದೆ. ಅಂದರೆ ಪುರಗಳನ್ನು ಹಿಂದೊಮ್ಮೆ ಶತ್ರುಗಳಿಂದ ರಕ್ಷಿಸಲೆಂದೇ ಶಸ್ತ್ರಧಾರಿಗಳಾಗಿದ್ದವರು ಈ ಪುರವಂತರು.